ರಸ್ತೆಯಲ್ಲೇ KSRTC ಬಸ್ ಸೀಜ್.. ಅಷ್ಟಕ್ಕೂ ಆಗಿದ್ದೇನು..?

ರಸ್ತೆಯಲ್ಲೇ KSRTC ಬಸ್ ಸೀಜ್.. ಅಷ್ಟಕ್ಕೂ ಆಗಿದ್ದೇನು..?

ಹಾಸನ: ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಿದ KSRTC ಅಧಿಕಾರಿಗಳಿಗೆ ನ್ಯಾಯಾಲಯ ಬಿಸಿ ಮುಟ್ಟಿಸಿದೆ. ಪರಿಹಾರದ ಹಣ ನೀಡದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಡಿಪೋಗೆ ಸೇರಿದ ಬಸ್​ನ ನ್ಯಾಯಾಲಯದ ಸಿಬ್ಬಂದಿ ನಡುರಸ್ತೆಯಲ್ಲೇ ಜಪ್ತಿ ಮಾಡಿದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

ಘಟನೆಯ ಹಿನ್ನೆಲೆ ಏನು?

2023ರಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ರೇಣುಕಪ್ಪ ಮತ್ತು ರವಿ ಕಿರಣ್ ಎಂಬುವರು ದುರಾದೃಷ್ಟವಶಾತ್ ಸಾವನ್ನಪ್ಪಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಚನ್ನರಾಯಪಟ್ಟಣದ ನ್ಯಾಯಾಲಯವು, ಮೃತರ ಕುಟುಂಬಕ್ಕೆ ಒಟ್ಟು 32.5 ಲಕ್ಷ ರೂಪಾಯಿ (32,50,000 ರೂ.) ಪರಿಹಾರ ನೀಡುವಂತೆ ಕೆಎಸ್‌ಆರ್‌ಟಿಸಿಗೆ ಆದೇಶಿಸಿತ್ತು.  ನ್ಯಾಯಾಲಯ ಆದೇಶ ನೀಡಿ ದೀರ್ಘಕಾಲ ಕಳೆದರೂ ಚಿಕ್ಕಮಗಳೂರು ವಿಭಾಗದ ಅಧಿಕಾರಿಗಳು ಪರಿಹಾರದ ಹಣವನ್ನು ಸಂತ್ರಸ್ತರ ಕುಟುಂಬಕ್ಕೆ ಪಾವತಿಸಿರಲಿಲ್ಲ. ಇದರಿಂದ ಬೇಸತ್ತ ಕುಟುಂಬಸ್ಥರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ಪರಿಹಾರ ನೀಡುವಲ್ಲಿ ಕೆಎಸ್‌ಆರ್‌ಟಿಸಿ ವಿಫಲವಾದ ಕಾರಣ, ಚಿಕ್ಕಮಗಳೂರು ಡಿಪೋಗೆ ಸೇರಿದ ಯಾವುದೇ ಬಸ್ ಕಂಡರೂ ತಕ್ಷಣ ಜಪ್ತಿ ಮಾಡುವಂತೆ ಚನ್ನರಾಯಪಟ್ಟಣ ನ್ಯಾಯಾಲಯವು ಕಠಿಣ ಆದೇಶ ಹೊರಡಿಸಿತ್ತು.

ನ್ಯಾಯಾಲಯದ ಆದೇಶದಂತೆ ಕಾರ್ಯಪ್ರವೃತ್ತರಾದ ಕೋರ್ಟ್ ಸಿಬ್ಬಂದಿ, ಇಂದು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಚಿಕ್ಕಮಗಳೂರು ಡಿಪೋಗೆ ಸೇರಿದ ಬಸ್‌ ಅನ್ನು ಚನ್ನರಾಯಪಟ್ಟಣದಲ್ಲಿ ತಡೆದು ನಿಲ್ಲಿಸಿದ್ದಾರೆ. ಬಳಿಕ ಬಸ್‌ನಲ್ಲಿದ್ದ ಪ್ರಯಾಣಿಕರನ್ನೆಲ್ಲ ಕೆಳಗಿಳಿಸಿ, ಬಸ್‌ ಅನ್ನು ಜಪ್ತಿ ಮಾಡಿದ್ದಾರೆ. ದಿಢೀರನೆ ಬಸ್ ಸೀಜ್ ಮಾಡಿದ ಪರಿಣಾಮ, ಬೆಂಗಳೂರಿಗೆ ಹೊರಟಿದ್ದ ಪ್ರಯಾಣಿಕರು ನಡುರಸ್ತೆಯಲ್ಲಿ ಪರದಾಡುವಂತಾಯಿತು. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾವು ಬೆಲೆ ತೆರುವಂತಾಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

Tags :

Hassan

Be the first to comment

Leave a Reply

Your email address will not be published. Required fields are marked *

ad image