
ಕೆಲ ದಿನಗಳ ಹಿಂದೆ ದೆಹಲಿ ಭಾರತ್ ಮಂಟಪದಲ್ಲಿ ನಡೆದ ಜಾಗತಿಕ ಎಐ ಶೃಂಗಸಭೆಯಲ್ಲಿ ಶರ್ಟ್ಲೆಸ್ ಆಗಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಸದಸ್ಯರನ್ನು ಹಿಮಾಚಲಪ್ರದೇಶದ ಶಿಮ್ಲಾದಲ್ಲಿ ದೆಹಲಿ ಪೊಲೀಸರು ಬಂಧಿಸಿದ ನಂತರ ಎರಡು ರಾಜ್ಯಗಳ ಪೊಲೀಸರ ಮಧ್ಯೆ ಹೈವೋಲ್ಟೆಜ್ ಘರ್ಷಣೆ ನಡೆದಿದ್ದು, ಪೊಲೀಸರೇ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಿದ ಘಟನೆ ನಡೆದಿದೆ. ಬುಧವಾರ ನಡೆದ ಈ ಎರಡು ರಾಜ್ಯಗಳ ಪೊಲೀಸರ ನಡುವೆ ನಡೆದ ಈ ಅಪರೂಪದ ನಾಟಕೀಯ ಘರ್ಷಣೆಯಲ್ಲಿ ದೆಹಲಿ ಪೊಲೀಸರ ವಿರುದ್ಧ ಹಿಮಾಚಲ ಪೊಲೀಸರು ಎಫ್ಐಆರ್ ದಾಖಲಿಸಿ ಬಂಧಿಸಿದ್ದರು. ತಡರಾತ್ರಿಯವರೆಗೂ ಎರಡು ರಾಜ್ಯಗಳ ಪೊಲೀಸರ ನಡುವೆ ಘರ್ಷಣೆ ನಡೆದಿದ್ದು, ಕೊನೆಗೂ ಪ್ರಕರಣ ರಾತ್ರಿಯೇ ಬಗೆಹರಿಸಲ್ಪಟ್ಟಿದೆ.
2026 ರ ಎಐ ಶೃಂಗಸಭೆಯಲ್ಲಿ ಶರ್ಟ್ ಧರಿಸದೇ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಸದಸ್ಯರು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿನ ರೆಸಾರ್ಟೊಂದರಲ್ಲಿ ತಂಗಿದ್ದಾರೆ ಎಂಬ ಮಾಹಿತಿ ಪಡೆದ ದೆಹಲಿ ಪೊಲೀಸರು ಅಲ್ಲಿಗೆ ಭೇಟಿ ನೀಡಿ ಅವರನ್ನು ಬಂಧಿಸಿದ ಕರೆದುಕೊಂಡು ಬರಲು ಮುಂದಾಗಿದ್ದಾರೆ. ಆದರೆ ಈ ವಿಚಾರದ ಬಗ್ಗೆ ತಮಗೆ ಮಾಹಿತಿ ನೀಡಿಲ್ಲ ಎಂದು ಹಿಮಾಚಲ ಪ್ರದೇಶದ ಪೊಲೀಸರು ದೆಹಲಿ ಪೊಲೀಸರನ್ನೆ ತಡೆದು ಅವರ ವಿರುದ್ಧ ಅಕ್ರಮ ಬಂಧನದ ಆರೋಪ ಹೊರಿಸಿ ಎಫ್ಐಆರ್ ದಾಖಲಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ದೆಹಲಿ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಸ್ಥಳೀಯ ಅಧಿಕಾರಿಗಳಿಗೆ ಪೂರ್ವ ಸೂಚನೆ ನೀಡದೆ ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಶಿಮ್ಲಾ ಪೊಲೀಸರು ಆರೋಪಿಸಿದ್ದಾರೆ. ಹಿಮಾಚಲ ಪೊಲೀಸ್ ಅಧಿಕಾರಿಗಳ ಪ್ರಕಾರ, ಸಾಮಾನ್ಯ ಉಡುಪಿನಲ್ಲಿರುವ 15ರಿಂದ 20 ವ್ಯಕ್ತಿಗಳು, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ಪ್ರವಾಸಿಗರನ್ನು ವಾಹನಗಳಿಗೆ ಬಲವಂತವಾಗಿ ಏರಿಸಿರುವುದು ಕಂಡುಬಂದಿದೆ. ಇದಲ್ಲದೆ, ಆರೋಪಿಗಳು ತಂಗಿದ್ದ ಚನ್ಶಾಲ್ ರೆಸಾರ್ಟ್ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳ ಡಿವಿಆರ್ ಅನ್ನು ಕೂಡ ರಶೀದಿ ನೀಡದೆ ತೆಗೆದುಕೊಂಡು ಹೋಗಲಾಗಿದೆ ಎಂದು ಆರೋಪಿಸಲಾಗಿದೆ. ಈ ದೂರುಗಳ ನಂತರ, ಹಿಮಾಚಲ ಪೊಲೀಸರು ದೆಹಲಿ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.






Be the first to comment
Leave a Reply