ಬೆಂಗಳೂರಿನ ಹೊರವಲಯಕ್ಕೂ ಕಾವೇರಿ 6ನೇ ಹಂತದಲ್ಲಿ ನೀರು ಪೂರೈಕೆ : ರಾಜ್ಯ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ

ಬೆಂಗಳೂರಿನ ಹೊರವಲಯಕ್ಕೂ ಕಾವೇರಿ 6ನೇ ಹಂತದಲ್ಲಿ ನೀರು ಪೂರೈಕೆ : ರಾಜ್ಯ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಹೊರವಲಯದ ಪ್ರದೇಶಗಳು ಹಾಗೂ ಉಪನಗರಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಜಲಮಂಡಳಿ ರೂಪಿಸಿರುವ ಕಾವೇರಿ 6ನೇ ಹಂತದ ಯೋಜನೆಗೆ ರಾಜ್ಯ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ.  9 ತಿಂಗಳ ಹಿಂದೆಯೇ ಡಿಪಿಆರ್ ಸಿದ್ದವಾಗಿದ್ದು, ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು. ರಾಜ್ಯ ಸರಕಾರ ಈಗ ಕಾವೇರಿ 6ನೇ ಹಂತದ ಯೋಜನೆಗೆ ಒಪ್ಪಿಗೆ ನೀಡಿದೆ. ಬರೋಬ್ಬರಿ 6,939 ಕೋಟಿ ರೂಪಾಯಿ ವೆಚ್ಚದಲ್ಲಿ ಕಾವೇರಿ 6ನೇ ಹಂತದ ಯೋಜನೆಯನ್ನು ಜಾರಿಗೊಳಿಸಲು ಡಿಪಿಆರ್ ಸಲ್ಲಿಕೆಯಾಗಿತ್ತು. ಕಾವೇರಿ 6ನೇ ಹಂತದ ಯೋಜನೆಯಲ್ಲಿ ಕೆಆರ್‌ಎಸ್ ನಿಂದ 6 ಟಿಎಂಸಿ ಅಡಿ ನೀರು ಅನ್ನು ನಗರ ಪ್ರದೇಶ, ಉಪನಗರ ಪ್ರದೇಶಗಳಿಗೆ ಸರಬರಾಜು ಮಾಡುವ ಪ್ಲ್ಯಾನ್ ಮಾಡಲಾಗಿದೆ. 6 ಟಿಎಂಸಿ ಅಡಿ ನೀರಿನ ಪೈಕಿ 4 ಟಿಎಂಸಿ ಅಡಿ ನೀರು  ಅನ್ನು ನಾಡಪ್ರಭು ಕೆಂಪೇಗೌಡ ಬಡಾವಣೆ, ಹೊಸದಾಗಿ ನಿರ್ಮಾಣವಾಗುತ್ತಿರುವ ಶಿವರಾಮಕಾರಂತ ಬಡಾವಣೆ ಸೇರಿದಂತೆ ಇತರೆ ಬಡಾವಣೆಗಳಿಗೆ ಪೂರೈಕೆ ಮಾಡಲಾಗುತ್ತೆ. ಉಳಿದ 2 ಟಿಎಂಸಿ ಅಡಿ ನೀರು ಅನ್ನು ಕರ್ನಾಟಕ ಗ್ರಾಮೀಣಾ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬೇಡಿಕೆಯ ಅನುಸಾರ ಮಾದನಾಯಕನಹಳ್ಳಿ, ಹುಣಸಮಾರನಹಳ್ಳಿ, ಚಿಕ್ಕಬಾಣಾವರ, ನೆಲಮಂಗಲ, ಹೊಸಕೋಟೆ, ದೇವನಹಳ್ಳಿ, ಬಾಶೆಟ್ಟಿಹಳ್ಳಿ ಹಾಗೂ ವಿಜಯಪುರಕ್ಕೆ ಸರಬರಾಜು ಮಾಡಲು ತೀರ್ಮಾನಿಸಲಾಗಿದೆ.

ಕಾವೇರಿಯಿಂದ ಸದ್ಯ ವಾರ್ಷಿಕ 29 ಟಿಎಂಸಿ ಅಡಿ ನೀರು ಅನ್ನು ಬೆಂಗಳೂರು ನಗರಕ್ಕಾಗಿ ಪಡೆಯಲಾಗುತ್ತಿದೆ. ಉದ್ದೇಶಿತ ಕಾವೇರಿ 6 ನೇ ಹಂತದ ಯೋಜನೆಯಡಿ 6 ಟಿಎಂಸಿ ಅಡಿ ನೀರು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕಾವೇರಿ 6ನೇ ಹಂತದ ಯೋಜನೆಯಡಿ ನಗರ ಹಾಗೂ ಹೊರವಲಯದಲ್ಲಿನ ಪ್ರದೇಶಗಳಿಗೆ ನೀರು ಪೂರೈಸಲು ಡಿಪಿಆರ್ ಸಿದ್ದಪಡಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸರ್ಕಾರದ ಅನುಮೋದನೆ ಈಗ ದೊರೆತಿರುವುದರಿಂದ ಇನ್ನೂ ಮುಂದೆ ಕಾಮಗಾರಿ ಆರಂಭವಾಗುತ್ತೆ. ಈ ಯೋಜನೆಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ.

ಇನ್ನೂ ಬೆಂಗಳೂರು ನಗರದ ಜನರ ನೀರಿನ ದಾಹ ತಣಿಸಲು ಪ್ರತಿ 10 ವರ್ಷಗಳಿಗೊಂದು ಯೋಜನೆ ತಯಾರಿಸಿ ನೀರು ಪೂರೈಸಲಾಗುತ್ತಿದೆ. ಕಾವೇರಿ 5ನೇ ಹಂತದ ಯೋಜನೆಗೆ 2014 ರಲ್ಲಿ ಚಾಲನೆ ನೀಡಲಾಯಿತು. 2024ರ ಅಕ್ಟೋಬರ್ ನಲ್ಲಿ ಕಾವೇರಿ ನೀರು ಅನ್ನು ನಗರದ ಜನತೆಗೆ 5ನೇ ಹಂತದ ಯೋಜನೆಯಡಿ ಸರಬರಾಜು ಮಾಡಲಾಯಿತು. ಈಗ ಕಾವೇರಿ 6ನೇ ಹಂತದ ಯೋಜನೆ ಆರಂಭಿಸಿದರೂ, ಯೋಜನೆ ಪೂರ್ಣವಾಗಿ ಕಾರ್ಯರೂಪಕ್ಕೆ ಬರಲು 10 ವರ್ಷ ಸಮಯ ಅವಕಾಶ ಬೇಕಾಗಬಹುದು. ಯೋಜನೆಗೆ 130 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದೆ.

ಈ ಯೋಜನೆಗೆ ಜೈಕಾದಿಂದ ಸಾಲ ಪಡೆಯಲಾಗುವುದು ಎಂದು ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.  ಕಾವೇರಿ 6ನೇ ಹಂತದ ಕುಡಿಯುವ ನೀರು ಯೋಜನೆಗೆ ಅನುಮೋದನೆ ನೀಡುವ ಮೂಲಕ ಗ್ರೇಟ್ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಾವೇರಿಯಿಂದ 6 ಟಿಎಂಸಿ ನೀರಿನ ವಿಚಾರ ಬಂದ ತಕ್ಷಣ ಕ್ಯಾಬಿನೆಟ್ ನಲ್ಲಿ ಪಾಸ್ ಮಾಡಿದ್ದೇವೆ. ಬೆಂಗಳೂರು ಯಾವ ರೀತಿ ಬೆಳೆಯುತ್ತಿದೆ ಎಂದು ಅರಿವಿದೆ. ಬೆಂಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಒದಗಿಸಲು 7 ಸಾವಿರ ಕೋಟಿ ರೂಪಾಯಿ ಹಣ ಖರ್ಚು ಮಾಡುತ್ತಿದ್ದೇವೆ. ಮುನ್ಸಿಪಾಲಿಟಿ ಕೂಡ ಬೆಳೆಯುತ್ತಿದೆ. ಅದಕ್ಕೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಜೈಕಾ ಸಪೋರ್ಟ್ ಮಾಡುತ್ತಿದೆ. ಜೈಕಾದಿಂದ ಸಾಲ ತೆಗೆದುಕೊಳ್ಳುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image