ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆ ಇರಾನ್ ವಾಯುಪ್ರದೇಶ ತಾತ್ಕಾಲಿಕವಾಗಿ ಮುಚ್ಚಿರುವುದರಿಂದ ಗಲ್ಫ್ ರಾಷ್ಟ್ರಗಳಲ್ಲಿ ಅನೇಕರ ಕನ್ನಡಿಗರು ಸಿಲುಕಿಕೊಂಡಿದ್ದಾರೆ.

ಪ್ರವಾಸಕ್ಕೆಂದು ತೆರಳಿದ್ದ ಬಳ್ಳಾರಿ ಮೂಲದ 35 ಪ್ರವಾಸಿಗರು, ಜೊತೆಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ , ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಬಳ್ಳಾರಿ ಭರತ್ ರೆಡ್ಡಿ ಸೇರಿದಂತೆ 150ಕ್ಕೂ ಹೆಚ್ಚು ಕನ್ನಡಿಗರು ದುಬೈನಲ್ಲಿ ಸಿಲುಕಿಕೊಂಡಿದ್ದಾರೆ. ಕುಟುಂಬ ಸಮೇತರಾಗಿ ಭೋಜೇಗೌಡ ದುಬೈ ತೆರಳಿದ್ದರು.
ದುಬೈನಲ್ಲಿ ವಿದ್ಯಾರ್ಥಿಗಳು ಸೇರಿ 150 ಹೆಚ್ಚು ಕನ್ನಡಿಗರು ಸಿಲುಕಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಅವರೆಲ್ಲಾ ಸಂಪರ್ಕಿಸಿ ಸುರಕ್ಷಿತವಾಗಿ ಕರೆತರುವ ಪ್ರಯತ್ನ ಮುಂದುವರೆದಿದೆ.
ಫೆ.23ರಂದು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ತೋರಣಘಟ್ಟ ಗ್ರಾಮದ 15 ಮಂದಿ ಮತ್ತು ಬಳ್ಳಾರಿ ಸುತ್ತಮುತ್ತಲಿನ 35 ಮಂದಿ ಸೇರಿ ಒಟ್ಟು 50ಕ್ಕೂ ಹೆಚ್ಚು ಕನ್ನಡಿಗರು ಪ್ರವಾಸಕ್ಕೆ ತೆರಳಿದ್ದರು. ವಾಪಸ್ಸು ಟಿಕೆಟ್ ಬುಕ್ ಮಾಡಿದ್ದರೂ ಶಾರ್ಜಾ, ಅಬುಧಾಬಿ ಮತ್ತು ದುಬೈ ವಿಮಾನ ನಿಲ್ದಾಣಗಳಲ್ಲಿ ಸಂಚಾರ ಸ್ಥಗಿತಗೊಂಡಿರುವುದರಿಂದ ಹೋಟೆಲ್ಗಳಲ್ಲಿ ತಂಗಬೇಕಾಗಿದೆ. ಪ್ರವಾಸದಲ್ಲಿ ಹಣ ಖರ್ಚಾಗಿ ಇದೀಗ ತಂಗುವ ವ್ಯವಸ್ಥೆಗೂ ಹಣದ ಕೊರತೆ ಎದುರಾಗಿದೆ. ಒಂದೇ ಕೊಠಡಿಯಲ್ಲಿ ಮೂವರು ತಂಗಿದ್ದು ದಿನಕ್ಕೆ ಸುಮಾರು 10,000 ರೂಪಾಯಿ ವೆಚ್ಚವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪ್ರವಾಸಿಗರು ವಿದೇಶಾಂಗ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದಿಂದ ತುರ್ತು ನೆರವು ಮತ್ತು ಶೀಘ್ರ ಸ್ವದೇಶಕ್ಕೆ ಮರಳುವ ವ್ಯವಸ್ಥೆಗಾಗಿ ಮನವಿ ಮಾಡಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡಿಗರಿಗಾಗಿ ಸಹಾಯವಾಣಿ ಆರಂಭಿಸುವುದಾಗಿ ಘೋಷಿಸಿದ್ದಾರೆ.
ಬಳ್ಳಾರಿಯ ಪಂಪನಗೌಡ ಕುಟುಂಬಸ್ಥರು ಕುಟುಂಬ ಸಮೇತರಾಗಿ ದುಬೈ ಪ್ರವಾಸಕ್ಕೆ ತೆರಳಿದ್ದರು. ಯಾಳ್ಪಿ ಪಂಪನಗೌಡ ಕುಟುಂಬದ 15 ಜನ ಸೇರಿ ಬಳ್ಳಾರಿಯಿಂದ 35 ಜನ ದುಬೈ ಪ್ರವಾಸಕ್ಕೆ ತೆರಳಿದ್ದರು. ದುಬೈನಲ್ಲಿ ಸಿಲುಕಿರುವ ಪ್ರವಾಸಿಗರು ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಯಾವುದೇ ಆತಂಕ ಇಲ್ಲ, ನಾವು ಸುರಕ್ಷಿತವಾಗಿದ್ದೇವೆ ಎಂದು ಕುಟುಂಬಸ್ಥರ ಜೊತೆ ಪ್ರವಾಸಿಗರು ಹೇಳಿದ್ದಾರೆ.
ಈಗಾಗಲೇ ಬಳ್ಳಾರಿ ಗ್ರಾಮೀಣ ಶಾಸಕ ಬಿ ನಾಗೇಂದ್ರ ಕೂಡಾ ಸಂಪರ್ಕ ಮಾಡಿದ್ದಾರೆ. ಬಳ್ಳಾರಿಯ 35 ಜನರು ದುರ್ಗದ 15 ಜನರು ಒಂದೆಡೆ ಇದ್ದೇವೆ ಎಂದು ಹೇಳಿದ್ದಾರೆ. ಶಾಸಕ ಭರತ್ ರೆಡ್ಡಿ ಕೂಡ ದುಬೈನಲ್ಲಿದ್ದಾರೆ. ಭರತ್ ರೆಡ್ಡಿ ಆಪ್ತರು ಸಂಪರ್ಕ ಮಾಡಿದ್ದಾರೆ. ಬುರ್ಜ್ ಖಲೀಫಾ ಪಕ್ಕದ ಲಾಡ್್ಜನಲ್ಲಿದ್ದೇವೆ ಎಂದು ಹೇಳಿದ್ದಾರೆ. ಆದರೆ ಅವರೆಲ್ಲರೂ ಆತಂಕದಲ್ಲಿದ್ದಾರೆ. ಕೂಡಲೇ ದುಬೈನಲ್ಲಿ ಸಿಲುಕಿರುವವರನ್ನು ಭಾರತಕ್ಕೆ ವಾಪಸ್ ಕರೆತರಬೇಕು ಎಂದು ಆಗ್ರಹಿಸಿದ್ದಾರೆ.






Be the first to comment
Leave a Reply