
ಬೆಂಗಳೂರು: ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಬಿ ವೃಂದದ 384 ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ 1:3 ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಎಸ್ಸಿ (KPSC) ಸೋಮವಾರ ಪ್ರಕಟಿಸಿದೆ. ಸದ್ಯ ಈ ಫಲಿತಾಂಶದ ವಿರುದ್ಧ ವಿದ್ಯಾರ್ಥಿಗಳು ಅಪಸ್ವರ ಎತ್ತಿದ್ದಾರೆ. ಒಂದೇ ಪರೀಕ್ಷಾ ಕೇಂದ್ರದ ಹಲವು ಅಭ್ಯರ್ಥಿಗಳು, ಒಂದೇ ಕುಟುಂಬದ ಕೆಲವರು ಆಯ್ಕೆ ಆಗಿರುವ ಬಗ್ಗೆ ಗಂಭೀರ ಆರೋಪ ಮಾಡಲಾಗಿದ್ದು, CBI ತನಿಖೆಗೆ ಒತ್ತಾಯಿಸಿದ್ದಾರೆ. 2023-24ನೇ ಸಾಲಿನಲ್ಲಿ 384 ಗ್ರೂಪ್ ಎ ಮತ್ತು ಬಿ ಹುದ್ದೆಗಳ ನೇಮಕಕ್ಕೆ ಕೆಪಿಎಸ್ಸಿ ಫೆ.26ರಂದು ಅಧಿಸೂಚನೆ ಹೊರಡಿಸಿತ್ತು. ಮೊದಲಿಗೆ ಆಗಸ್ಟ್ 2024ರಲ್ಲಿ ನಡೆದ ಪ್ರಾಥಮಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಅನುವಾದದಲ್ಲಿ ಪ್ರಮಾದ ಉಂಟಾಗಿ ಸರ್ಕಾರ ಪೂರ್ವಭಾವಿ ಪರೀಕ್ಷೆ ರದ್ದುಗೊಳಿಸಿ 2024ರ ಡಿ.29ಕ್ಕೆ ಮರು ಪರೀಕ್ಷೆ ನಡೆಸಿತ್ತು. ಆ ಪರೀಕ್ಷೆಯಲ್ಲೂ ಅನುವಾದದಲ್ಲಿ ಎಡವಟ್ಟುಗಳಾಗಿದ್ದವು.
ಬಳಿಕ 2025ರ ಮೇ 3, 5, 7 ಮತ್ತು 9ರಂದು ಮುಖ್ಯ ಪರೀಕ್ಷೆಗಳು ನಡೆದಿದ್ದವು. ಈಗ ಆಯೋಗ ಮುಖ್ಯ ಪರೀಕ್ಷಾ ಫಲಿತಾಂಶ ಪ್ರಕಟಿಸಿ 1:3 ಅನುಪಾತದಲ್ಲಿ ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಆಯ್ಕೆ ಮಾಡಿದೆ. ಸದ್ಯ ಈ ಆಯ್ಕೆ ಪಟ್ಟಿ ಸಾಕಷ್ಟು ಗೊಂದಲ ಉಂಟುಮಾಡಿದೆ. ಕರ್ನಾಟಕ ಲೋಕ ಸೇವಾ ಆಯೋಗದ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಭಾವಿಗಳ ಮಕ್ಕಳಿಗೆ ಸೀಟ್ ಕೊಡಿಸಲು ಕುತಂತ್ರ
ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದ 15 ಮಂದಿ ಆಯ್ಕೆ ಆಗಿದ್ದಾರೆ. ಸೀರಿಯಲ್ ನಂಬರ್ ಸಾಲಾಗಿ ಆಯ್ಕೆ ಹೇಗೆ ಎಂದು ಪ್ರಶ್ನೆ ಮಾಡಲಾಗಿದೆ. ಇನ್ನು ಒಂದೇ ಕುಟುಂಬದ ಇಬ್ಬರು-ಮೂವರು ಆಯ್ಕೆ ಆಗಿರುವ ಆರೋಪ ಕೇಳಿಬಂದಿದೆ. ಪ್ರಾಮಾಣಿಕವಾಗಿ ಓದಿದವರಿಗೆ ಕೆಲಸ ಸಿಗಬೇಕು. ಹೀಗಾಗಿ ಕಮಿಟಿ ರಚನೆ ಮಾಡಿ ತನಿಖೆ ಮಾಡುವಂತೆ ಆಗ್ರಹಿಸಲಾಗಿದೆ. ಸರ್ಕಾರದ ಕೈಲಿ ಆಗಲಿಲ್ಲ ಅಂದರೆ ಸಿಬಿಐಗೆ ವಹಿಸಲು ಒತ್ತಾಯಿಸಲಾಗಿದೆ. ಯಾವುದೇ ಕಾರಣಕ್ಕೂ ಕೆಪಿಎಸ್ಸಿಗೆ ನೋಟಿಫಿಕೇಶನ್ ಕೊಡಬಾರದು. ಪ್ರಭಾವಿಗಳ ಮಕ್ಕಳಿಗೆ ಸೀಟ್ ಕೊಡಿಸಲು ಕುತಂತ್ರ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪ್ರಧಾನಿ ಮೋದಿಗೆ ದೂರು ನೋಡಿದ ಅಭ್ಯರ್ಥಿಗಳು
ಇನ್ನು ಕರ್ನಾಟಕ ಲೋಕಸೇವಾ ಆಯೋಗದಿಂದ ಅಕ್ರಮ ಆರೋಪ ಹಿನ್ನೆಲೆ ಕೆಪಿಎಸ್ಸಿ ನೇಮಕಾತಿಯಲ್ಲಿ ಮಧ್ಯಪ್ರವೇಶಿಸಲು ಪ್ರಧಾನಿ ನರೇಂದ್ರ ಮೋದಿಗೆ ಅಭ್ಯರ್ಥಿಗಳು ಮನವಿ ಮಾಡಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆ ಮೂಲಕ ಫಲಿತಾಂಶದಲ್ಲಿ ಅಕ್ರಮ ನಡೆದಿದೆ ಎಂದು ಪ್ರಧಾನಿ ಮೋದಿಗೆ ದೂರು ನೀಡಿದ್ದಾರೆ. ಒಂದೇ ಕೊಠಡಿಯಲ್ಲಿ ಕುಳಿತು ಪರೀಕ್ಷೆ ಬರೆದಿದ್ದ 15 ಜನರ ಆಯ್ಕೆ ಮಾಡಲಾಗಿದೆ. ನಾವು ಉತ್ತಮವಾಗಿ ಪರೀಕ್ಷೆ ಬರೆದಿದರೂ ಆಯ್ಕೆಯಾಗಿಲ್ಲವೆಂದು ದೂರು ನೀಡಿದ್ದು, KAS ಫಲಿತಾಂಶದ ಪ್ರತಿ ಟ್ಯಾಗ್ ಮಾಡಿದ್ದಾರೆ.






Be the first to comment
Leave a Reply