
ದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮಾನವ ಕುಲ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಅತಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ 6 ವರ್ಷದ ಬಾಲಕಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ಅಪಘಾತದ ಬಳಿಕ ಚಾಲಕನ ಬಳಿ ಮಗುವಿನ ಅಜ್ಜಿ ಸಹಾಯಕ್ಕಾಗಿ ಅಂಗಲಾಚಿದರೂ, ಪಾಪಿ ಚಾಲಕ ಕರುಣೆ ತೋರದೆ ಪರಾರಿಯಾಗಿದ್ದಾನೆ. ದೆಹಲಿಯಲ್ಲಿ ಅಜ್ಜಿ ಮತ್ತು 6 ವರ್ಷದ ಮೊಮ್ಮಗಳು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅತಿ ವೇಗವಾಗಿ ಬಂದ ವಾಹನವೊಂದು ಮಗುವಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಗು ರಕ್ತದ ಮಡುವಿನಲ್ಲಿ ಬಿದ್ದಿದೆ.
ಅಜ್ಜಿ ರೋಧನೆ ಕೇಳದ ಚಾಲಕ
ಈ ಬಗ್ಗೆ ಕಣ್ಣೀರು ಹಾಕುತ್ತಾ ಹೇಳಿಕೆ ನೀಡಿರುವ ಮೃತ ಬಾಲಕಿಯ ಅಜ್ಜಿ, ಅಪಘಾತವಾದ ತಕ್ಷಣ ನಾನು ಚಾಲಕನ ಬಳಿ ಓಡಿ ಹೋದೆ. ಕೈಮುಗಿದು ಬೇಡಿಕೊಂಡೆ. ದಯವಿಟ್ಟು ನನ್ನ ಮೊಮ್ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಹಾಯ ಮಾಡಿ ಎಂದು ಗೋಗರೆದೆ. ಆದರೆ ಆತ ನನ್ನ ಮಾತನ್ನು ಕೇಳಿಸಿಕೊಳ್ಳಲೇ ಇಲ್ಲ. ಸಹಾಯ ಮಾಡುವ ಬದಲು ವಾಹನದ ವೇಗ ಹೆಚ್ಚಿಸಿ ಅಲ್ಲಿಂದ ಓಡಿಹೋದ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.
ಆಸ್ಪತ್ರೆ ಸೇರುವ ಮುನ್ನವೇ ಸಾವು
ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ಯುದ್ರೂ, ಅಷ್ಟರಲ್ಲೇ ಮಗು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಹಿಟ್ ಅಂಡ್ ರನ್ (Hit and Run) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಪರಾರಿಯಾಗಿರುವ ಚಾಲಕನಿಗಾಗಿ ಬಲೆ ಬೀಸಿದ್ದಾರೆ. ಒಟ್ಟಿನಲ್ಲಿ, ಕಣ್ಣೆದುರೇ ಮೊಮ್ಮಗಳು ನರಳಾಡುತ್ತಿದ್ದರೂ ಸಹಾಯ ಸಿಗದೆ ಪ್ರಾಣಬಿಟ್ಟ ಘಟನೆ ಆ ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ.






Be the first to comment
Leave a Reply