
ಶಿರಸಿ: ದಕ್ಷಿಣ ಭಾರತದ ಅತಿದೊಡ್ಡ ಹಾಗೂ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ ದೊರೆತಿದೆ. ಭಕ್ತ ಸಾಗರದ ನಡುವೆ ಕಂಗೊಳಿಸುತ್ತಿರುವ ಶ್ರೀ ಮಾರಿಕಾಂಬೆ ರಥಾರೂಢಳಾಗಿ ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ.
ನಿನ್ನೆ ರಾತ್ರಿಯಿಂದಲೇ ಜಾತ್ರೆಯ ಸಾಂಪ್ರದಾಯಿಕ ವಿಧಿ ವಿಧಾನಗಳು ವಿಜೃಂಭಣೆಯಿಂದ ಪ್ರಾರಂಭವಾಗಿವೆ. ನಿನ್ನೆ ರಾತ್ರಿ ಶ್ರೀ ದೇವಿಯ ಕಲ್ಯಾಣೋತ್ಸವ ಅತ್ಯಂತ ಸಡಗರದಿಂದ ಭಕ್ತಿಭಾವಗಳೊಂದಿಗೆ ನೆರವೇರಿತು. ತದನಂತರ ಇಂದು ಮುಂಜಾನೆ ಸರಿಯಾಗಿ 8.30ರ ಶುಭಲಗ್ನದಲ್ಲಿ ಶ್ರೀ ಮಾರಿಕಾಂಬಾ ದೇವಿಯ ರಥಾರೋಹಣ ಕಾರ್ಯಕ್ರಮ ಸಂಪನ್ನಗೊಂಡಿತು. ಸರ್ವಾಲಂಕೃತಳಾಗಿ ರಥದ ಮೇಲೆ ಆಸೀನಳಾಗಿರುವ ತಾಯಿಯ ದರ್ಶನ ಪಡೆದು ಭಕ್ತರು ಪುನೀತರಾಗುತ್ತಿದ್ದಾರೆ. ರಥಾರೋಹಣದ ಬಳಿಕ ದೇವಿಯ ಭವ್ಯ ಮೆರವಣಿಗೆ ಆರಂಭವಾಗಿದ್ದು, ಸಾವಿರಾರು ಭಕ್ತರು ಈ ಕಣ್ಮನ ಸೆಳೆಯುವ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಶಿರಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಸಾಗುವ ದೇವಿ, ಬಳಿಕ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆಯಾಗಲಿದ್ದಾಳೆ.

ಮಾರಿಕಾಂಬಾ ದೇವಿಯ ರಥೋತ್ಸವದಲ್ಲಿ ಭಕ್ತಿಯ ಪರಾಕಾಷ್ಠತೆ ಮೇಳೈಸಿದೆ. ಭಕ್ತಿಭಾವದಲ್ಲಿ ಮಿಂದೇಳುತ್ತಿರುವ ಅಪಾರ ಭಕ್ತ ಸಮೂಹ, ದೇವಿಯ ರಥಕ್ಕೆ ಬಾಳೆಹಣ್ಣು, ಕೋಳಿ, ಅರಳು ಮುಂತಾದ ಸುವಸ್ತುಗಳನ್ನು ಎಸೆಯುವ ಮೂಲಕ ದೇವಿಗೆ ನಮನ ಸಲ್ಲಿಸಿ ತಮ್ಮ ಹರಕೆ ತೀರಿಸುತ್ತಿದ್ದಾರೆ. ಜೈಕಾರದ ಘೋಷಣೆಗಳು ಮುಗಿಲು ಮುಟ್ಟಿವೆ. ಈ ಐತಿಹಾಸಿಕ ಶಿರಸಿ ಜಾತ್ರೆಯು ಮಾರ್ಚ್ 4 ರವರೆಗೆ ಒಂಬತ್ತು ದಿನಗಳ ಕಾಲ ಅತ್ಯಂತ ಅದ್ದೂರಿಯಾಗಿ ನಡೆಯಲಿದೆ. ಇದೊಂದು ಪ್ರಸಿದ್ಧ ಶಕ್ತಿಪೀಠ ಹಾಗೂ ದಕ್ಷಿಣ ಭಾರತದ ಪ್ರಮುಖ ಜಾತ್ರೆಯಾಗಿರುವುದರಿಂದ, ಕೇವಲ ಕರ್ನಾಟಕದಿಂದಷ್ಟೇ ಅಲ್ಲದೇ ನೆರೆಯ ರಾಜ್ಯಗಳು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಈ ಜಾತ್ರೆಗೆ ಆಗಮಿಸಲಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಜಿಲ್ಲಾಡಳಿತ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.






Be the first to comment
Leave a Reply