Stone Pelting: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಬಾಗಲಕೋಟೆ ಉದ್ವಿಗ್ನ

ಬಾಗಲಕೋಟೆಯ (bagalakote news) ಕಿಲ್ಲಾ ಓಣಿಯ ಮಸೀದಿ ಬಳಿ ​ಶಿವಾಜಿ ಜಯಂತಿ ಮೆರವಣಿಗೆ ಬಂದಾಗ ಕಲ್ಲು ಹಾಗೂ ಚಪ್ಪಲಿ ಬಂದು ಬಿದ್ದಿವೆ. ಒಂದಿಬ್ಬರಿಗೆ ಗಾಯಗಳಾಗಿವೆ. ಇದರಿಂದ ಮೆರವಣಿಗೆಯಲ್ಲಿದ್ದವರು ಉದ್ವಿಗ್ನರಾಗಿದ್ದಾರೆ. ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ಭದ್ರತೆ ಬಿಗಿಗೊಳಿಸಿದ್ದು, ಸೆಕ್ಷನ್‌ 144 ಹಾಕಿದ್ದಾರೆ.

ಬಾಗಲಕೋಟೆ, ಫೆ.20: ಶಿವಾಜಿ ಜಯಂತಿ (shivaji jayanthi) ಮೆರವಣಿಗೆ ವೇಳೆ ದುಷ್ಕರ್ಮಿಗಳು ಕಲ್ಲು, ಚಪ್ಪಲಿ ತೂರಾಟ (Stone pelting) ನಡೆಸಿರುವ ಘಟನೆ ಬಾಗಲಕೋಟೆಯ (bagalakote news) ಕಿಲ್ಲಾ ಓಣಿಯಲ್ಲಿ ನಡೆದಿದೆ. ಘಟನೆಯಲ್ಲಿ ಪೊಲೀಸ್​​ ಸಿಬ್ಬಂದಿ ಹಾಗೂ ಒಬ್ಬ ಸಾರ್ವಜನಿಕರಿಗೆ ಗಾಯವಾಗಿರುವ ಮಾಹಿತಿ ಇದ್ದು, ಕಲ್ಲು ತೂರಾಟ ಹಿನ್ನೆಲೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಅನಾಹುತ ನಡೆಯದಂತೆ ನೋಡಿಕೊಳ್ಳಲು ಪೊಲೀಸ್​​ ಸಿಬ್ಬಂದಿ ಸ್ಥಳದಲ್ಲಿಯೇ ಬೀಡುಬಿಟ್ಟಿದ್ದಾರೆ.

ಘಟನೆ ನಡೆದ ಮರು ಕ್ಷಣವೇ ಜನರನ್ನು ಚದುರಿಸಿ ಪೊಲೀಸರು ಪರಿಸ್ಥಿತಿ ತಿಳಿಗೊಳಿಸುವ ಯತ್ನ ಮಾಡಿದ್ದು, ಮುಂಜಾಗ್ರತಾ ಕ್ರಮವಾಗಿ ಪಂಕಾ ಮಸೀದಿ ಮತ್ತು ಕೊತ್ತಲೇಶ್ವರ ದೇಗುಲ ಬಳಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಕಲ್ಲು ತೂರಾಟದ ಹಿನ್ನೆಲೆ ಹಿಂದೂ ಕಾರ್ಯಕರ್ತ ಪ್ರಕಾಶ್ ಅರಕೇರಿ ಎಂಬುವರ ತಲೆಗೆ ಗಾಯವಾಗಿದ್ದು, ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

​ಶಿವಾಜಿ ಜಯಂತಿ ಮೆರವಣಿಗೆ ಮಸೀದಿ ಬಳಿ ಬಂದಾಗ ಎರಡು ಕಲ್ಲು ಬಂದು ಬಿದ್ದಿವೆ. ಸದ್ಯ ಪರಿಸ್ಥಿತಿ ತಿಳಿಯಾಗಿದ್ದು, ನಾವು ವಿಡಿಯೋಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ಬಾಗಲಕೋಟೆಯಲ್ಲಿ ಹೆಚ್ಚಿನ ಭದ್ರತೆ ‌ಕಲ್ಪಿಸಲಾಗಿದ್ದು,ಆರೋಪಿಗಳನ್ನ ಬಂಧಿಸಲಾಗುತ್ತದೆ. ಸದ್ಯಕ್ಕೆ ನಗರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಬಾಗಲಕೋಟೆ ಎಸ್ಪಿ ಸಿದ್ಧಾರ್ಥ್ ತಿಳಿಸಿದ್ದಾರೆ.

ತಳ್ಳು ಗಾಡಿಗಳಿಗೆ ಬೆಂಕಿ

ಕಲ್ಲು ತೂರಾಟದ ವೇಳೆ ತರಕಾರಿ ಮಾರುಕಟ್ಟೆಯ ಮೂರು ತಳ್ಳುಗಾಡಿಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆಯೂ ನಡೆದಿದೆ. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಕೂಡಲೇ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.

ಘಟನೆಯನ್ನು ಖಂಡಿಸಿ ಯುವಕರು ರಸ್ತೆಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದು, ಕಲ್ಲೆಸೆದವರನ್ನು ಬಂಧಿಸಬೇಕು ಮತ್ತು ಐಜಿಪಿ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದ ಪ್ರಸಂಗ ನಡೆದಿದೆ. ಯುವಕರನ್ನು ಮನವೊಲಿಸಿ ಪೊಲೀಸರು ಕಳುಹಿಸಿದ್ದರೂ ಆರೋಪಿಗಳನ್ನು ಆರೆಸ್ಟ್​​ ಮಾಡಿದಿದ್ದಲ್ಲಿ ಬಾಗಲಕೋಟೆ ಬಂದ್​​ಗೆ ಕರೆ ನೀಡುತ್ತೇವೆ ಎಂದು ಹಿಂದೂ ಕಾರ್ಯಕರ್ತರು ಎಚ್ಚರಿಸಿದ್ದಾರೆ.

ನಿಷೇಧಾಜ್ಞೆ ಜಾರಿ

ಕಲ್ಲು, ಚಪ್ಪಲಿ ತೂರಾಟ ಹಿನ್ನೆಲೆ ಫೆ.24ರ ಮಧ್ಯರಾತ್ರಿವರೆಗೆ ಹಳೆ ಬಾಗಲಕೋಟೆ, ನವನಗರ, ವಿದ್ಯಾಗಿರಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಬಾಗಲಕೋಟೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ್ ಈ ಬಗ್ಗೆ ಆದೇಶಿಸಿದ್ದು, ಸಾರ್ವಜನಿಕ ಸ್ಥಳದಲ್ಲಿ 4 ಕ್ಕಿಂತ ಹೆಚ್ಚು ಜನ ಸೇರಿ‌ ತಿರುಗಾಡುವಂತಿಲ್ಲ.ಅಪಾಯಕಾರಿ ಶಸ್ತ್ರಾಸ್ತ್ರ ಹಿಡಿದು ಓಡಾಡುವುದು, ಸುರಕ್ಷತೆಗೆ ಧಕ್ಕೆ ತರುವಂತ ಯಾವುದೇ ಚಟುವಟಿಕೆ ಮತ್ತು ಅನುಮತಿ ಇಲ್ಲದೆ ಯಾವುದೇ ಸಭೆ ಸಮಾರಂಭ ನಡೆಸುವುದು, ಧರಣಿ ನಡೆಸುವುದನ್ನು ನಿಷೇಧಿಸಲಾಗಿರೋದಾಗಿ ಆದೇಶದಲ್ಲಿ ತಿಳಿಸಲಾಗಿದೆ.

 

Be the first to comment

Leave a Reply

Your email address will not be published. Required fields are marked *

ad image