ಬೆಂಗಳೂರು,ಮಾ.6- ದಾಖಲೆಯ 17ನೇ ಬಜೆಟ್ ಮಂಡನೆ ಮಾಡಿದ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸರ್ಕಾರಿ ಹುದ್ದೆಯ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಪ್ರಮುಖ ಇಲಾಖೆಗಳಲ್ಲಿ ಖಾಲಿ ಇರುವ 56,432 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ಉದ್ಯೋಗ ನೇಮಕಾತಿಗಳಲ್ಲಿ ನ್ಯಾಯಾಲಯದ ಪ್ರಕರಣಗಳಿಂದ ಉಂಟಾಗಿದ್ದ ವಿಳಂಬವನ್ನು ಪರಿಗಣಿಸಿ ವಯೋಮಿತಿಯಲ್ಲಿ ಒಂದು ಬಾರಿಗೆ 5 ವರ್ಷ ಸಡಿಲಿಕೆ ನೀಡಿದ್ದೇವೆ ಎಂದು ತಮ 2026-27ನೇ ಸಾಲಿನ ಬಜೆಟ್ನಲ್ಲಿ ಘೋಷಿಸಿದರು.

ಇತ್ತೀಚೆಗಷ್ಟೇ ವಿದ್ಯಾನಗರಿ ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಂಕಾಂಕ್ಷಿಗಳು ಹಾಗೂ ನಿರುದ್ಯೋಗಿ ಯುವಕರು ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದರು. ಓದಿದ್ದರೂ ನೋಟಿಫಿಕೇಶನ್ ಇಲ್ಲದೆ ವಯಸ್ಸು ಮೀರಿ ಹೋಗುತ್ತಿದೆ, ಕೂಡಲೇ ನೇಮಕಾತಿ ಪ್ರಕ್ರಿಯೆ ಶುರು ಮಾಡಿ ಎಂದು ಆಗ್ರಹಿಸಿದ್ದರು.
ಧಾರವಾಡದ ಯುವಕರ ಈ ಆಕ್ರೋಶ ಮತ್ತು ಕೂಗು ಕೊನೆಗೂ ವಿಧಾನಸೌಧದ ಮೆಟ್ಟಿಲೇರಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಯುವಕರ ಧ್ವನಿಗೆ ಓಗೊಟ್ಟು ಈ ಬೃಹತ್ ನೇಮಕಾತಿಗೆ ಹಸಿರು ನಿಶಾನೆ ತೋರಿದ್ದಾರೆ.
ಬೆಂಗಳೂರು, ಧಾರವಾಡ, ಮೈಸೂರು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ಪಿಜಿ ಮಾಡಿಕೊಂಡು, ಕೋಚಿಂಗ್ ಸಾವಿರಾರು ರೂ. ಸುರಿದು ಹಗಲಿರುಳು ಓದುತ್ತಿರುವ ಲಕ್ಷಾಂತರ ಯುವಕರಿಗೆ ಈ ಘೋಷಣೆ ದೊಡ್ಡ ಬೂಸ್ಟ್ ಕೊಟ್ಟಿದೆ.
ಸದ್ಯ ಸಿಎಂ ಬಜೆಟ್ನಲ್ಲಿ ಒಟ್ಟಾರೆ 56 ಸಾವಿರ ಹುದ್ದೆಗಳ ಭರ್ತಿ ಎದು ಹೇಳಿದ್ದರೂ, ಯಾವ ಎಷ್ಟು ಎಂಬುದು ಅಧಿಕೃತವಾಗಿ ಹೊರಬೀಳಬೇಕಿದೆ. ಆದರೆ ವಿಧಾನಸೌಧದ ಮೂಲಗಳ ಪ್ರಕಾರ, ಅತಿ ಹೆಚ್ಚು ಖಾಲಿ ಇರುವ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ (ಶಿಕ್ಷಕರ ನೇಮಕಾತಿ), ಆರೋಗ್ಯ, ಕಂದಾಯ ಮತ್ತು ಇಲಾಖೆಗಳಲ್ಲಿ ದೊಡ್ಡ ಮಟ್ಟದ ನೇಮಕಾತಿ ನಡೆಯುವ ಪಕ್ಕಾ ಲೆಕ್ಕಾಚಾರವಿದೆ.ಮುಖ್ಯಮಂತ್ರಿಗಳ ಹೇಳಿಕೆಯಿಂದ ಎಲ್ಲರ ಕಣ್ಣುಗಳು ಈಗ ನೇಮಕಾತಿ ಪ್ರಾಧಿಕಾರಗಳಾದ ಕೆಪಿಎಸ್ಸಿ ಮತ್ತು ಕೆಇಎ ಕಡೆ ತಿರುಗಿವೆ.






Be the first to comment
Leave a Reply