ರಾಜ್ಯಸಭೆ ಚುನಾವಣೆ : ಅಭಿಷೇಕ್‌ ಮನುಸಿಂಗ್ವಿ ಸೇರಿ 6 ಮಂದಿ ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಕಾಂಗ್ರೆಸ್‌‍

ವಕೀಲ ಅಭಿಷೇಕ್‌ ಮನುಸಿಂಗ್ವಿ ಸೇರಿದಂತೆ ಆರು ಮಂದಿ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌‍ ಹೈಕಮಾಂಡ್‌ ಅವಕಾಶ ಕಲ್ಪಿಸಿದೆ.ಛತ್ತೀಸ್‌‍ಗಡದ ಮಹಿಳಾ ಕಾಂಗ್ರೆಸ್‌‍ನ ಅಧ್ಯಕ್ಷೆ ಫುಲೋದೇವಿ ನೇತಂ, ಹರಿಯಾಣದ ದಲಿತ ಚಳುವಳಿಗಾರ ಕರ್ಮವೀರ ಸಿಂಗ್‌ ಬುದ್ಧ, ಕಿರುತೆರೆಯ ನಟ ಉತ್ತರ ಪ್ರದೇಶ ಮೂಲದ ಅನುರಾಗ್‌ ಶರ್ಮ, ತಮಿಳುನಾಡಿನ ಕ್ರಿಸ್ಟೋಪರ್‌ ತಿಲಕ್‌, ತೆಲಂಗಾಣದ ವೇಮ್‌ ನರೇಂದ್ರ ರೆಡ್ಡಿ ಅವರಿಗೆ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ.

ತೆಲಂಗಾಣದಲ್ಲಿ ರಾಜ್ಯಸಭೆಯ ಎರಡು ಸ್ಥಾನಗಳ ತೆರುವಾಗಿದೆ. ಅಭಿಷೇಕ್‌ ಮನುಸಿಂಗ್ವಿ ಅವರ ಅವಧಿ ಏ.9ಕ್ಕೆ ಮುಕ್ತಾಯವಾಗುತ್ತದೆ. ಮತ್ತೆ ತೆಲಂಗಾಣದಿಂದಲೇ ಅಭಿಷೇಕ್‌ ಸಿಂಗ್ವಿ ಅವರನ್ನು ಪುನರ್‌ ಆಯ್ಕೆಯಾಗಲು ಕಾಂಗ್ರೆಸ್‌‍ ಅವಕಾಶ ಕಲ್ಪಿಸಿದೆ.

ತೆಲಂಗಾಣ ಮುಖ್ಯಮಂತ್ರಿ ಅವರ ಸಲಹೆಗಾರರಾಗಿರುವ ಮಾಜಿ ಶಾಸಕ ವೇಮ್‌ ನರೇಂದ್ರ ರೆಡ್ಡಿ ಅವರಿಗೆ ಬಿಆರ್‌ಎಸ್‌‍ ಪಕ್ಷದ ಕೆ.ಆರ್‌.ಸುರೇಶ್‌ ರೆಡ್ಡಿ ಅವರ ನಿವೃತ್ತಿಯಿಂದ ತೆರವಾಗುತ್ತಿರುವ ಸ್ಥಾನದಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುತ್ತಿದೆ.

ಮಹಾರಾಷ್ಟ್ರ, ಒಡಿಸಾ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ಛತ್ತೀಸ್‌‍ಗಡ, ಹರಿಯಾಣ, ಹಿಮಾಚಲ ಪ್ರದೇಶ, ತೆಲಂಗಾಣ ಸೇರಿ 10 ರಾಜ್ಯಗಳಿಂದ 37 ರಾಜ್ಯಸಭಾ ಸ್ಥಾನಗಳಿಗೆ ಮಾ.16ರಂದು ದೈವಾರ್ಷಿಕ ಚುನಾವಣೆ ನಡೆಯುತ್ತಿದೆ. ಫೆ.26ರಿಂದ ಅಧಿಸೂಚನೆ ಜಾರಿಯಾಗಿದ್ದು, ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

ಛತ್ತೀಸ್‌‍ಗಡ ರಾಜ್ಯದಿಂದ ಅಭ್ಯರ್ಥಿಯಾಗುತ್ತಿರುವ ಫುಲೋದೇವಿ ನೇತಂ ಅವರು ಬಿಜೆಪಿಯ ಹಿಂದುಳಿದ ನಾಯಕಿಯಾಗಿರುವ ಲಕ್ಷ್ಮಿವೆರ್ಮ ಅವರೊಂದಿಗೆ ರಾಜ್ಯಸಭಾ ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

ಹರಿಯಾಣ ರಾಜ್ಯದಲ್ಲಿ ಕರ್ಮವೀರಸಿಂಗ್‌ ವಿರುದ್ಧ ಪ್ರಭಾವಿ ದಲಿತ ನಾಯಕರಾಗಿದ್ದು, ಅವರಿಗೆ ಅವಕಾಶ ಕಲ್ಪಿಸುವ ಮೂಲಕ ಕಾಂಗ್ರೆಸ್‌‍ ಪಕ್ಷ ಸಾಮಾಜಿಕ ನ್ಯಾಯವನ್ನು ಪಾಲನೆ ಮಾಡುವ ಪ್ರಯತ್ನ ನಡೆಸಿದೆ.ಹಿಮಾಚಲ ಪ್ರದೇಶದಿಂದ ಉತ್ತರಪ್ರದೇಶ ಮೂಲದ ಅನುರಾಗ್‌ ಶರ್ಮ ಅವರನ್ನು ಗೆಲಿಸುವ ಪ್ರಯತ್ನ ನಡೆಸಲಾಗಿದೆ.

ಕಿರುತೆರೆ ದಾರವಾಹಿಗಳ ಮೂಲಕ ಜನಪ್ರಿಯತೆ ಪಡೆದಿರುವ ಅನುರಾಗ್‌ ಶರ್ಮ ಕಂಗ್ರ ಜಿಲ್ಲಾ ಕಾಂಗ್ರೆಸ್‌‍ನ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌‍ ಸರ್ಕಾರ ಇರುವ ಹಿಮಾಚಲ ಪ್ರದೇಶದಲ್ಲಿ ಸುಲಭದ ಗೆಲುವಿನ ಹಿನ್ನೆಲೆಯಲ್ಲಿ ಅನುರಾಗ್‌ ಶರ್ಮ ಅವರನ್ನು ಕಣಕ್ಕಿಳಿಸಲಾಗಿದೆ.
ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್‌‍ ಮೈತ್ರಿ ಸರ್ಕಾರಗಳು ಆಡಳಿತದಲ್ಲಿದ್ದು, ಇದೇ ವರ್ಷ ಅಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಡಿಎಂಕೆ, ಕಾಂಗ್ರೆಸ್‌‍ ಪಕ್ಷಕ್ಕೆ ರಾಜ್ಯಸಭಾ ಸ್ಥಾನ ಬಿಟ್ಟುಕೊಟ್ಟಿದ್ದು ಕ್ರಿಸ್ಟೋಪರ್‌ ತಿಲಕ್‌ರನ್ನು ಕಣಕ್ಕಿಳಿಸಲಾಗುತ್ತಿದೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ಆದೇಶದ ಮೇರೆಗೆ 6 ಮಂದಿ ಅಭ್ಯರ್ಥಿಗಳನ್ನು ಘೋಷಿಸುತ್ತಿರುವುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ತಿಳಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image