ಸಿಎಂ ಪಟ್ಟಕ್ಕೆ ಡಿಕೆಶಿ ಪಟ್ಟು – ಸೋನಿಯಾ, ರಾಹುಲ್‌ ಕೊಟ್ಟ ಅಭಯವೇನು?

ಬೆಂಗಳೂರು: ಮುಖ್ಯಮಂತ್ರಿ ಪಟ್ಟಕ್ಕಾಗಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೈಕಮಾಂಡ್ ಮುಂದೆ ಪ್ರಬಲ ದಾಳ ಉರುಳಿಸಿದ್ದಾರೆ. ದೆಹಲಿ ರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಭೇಟಿಯಾಗಿದ್ದ ಡಿಕೆಶಿ, ಇವತ್ತು ಜನಪಥ್ ನಿವಾಸದಲ್ಲಿ ಪಕ್ಷದ ವರಿಷ್ಠೆ ಸೋನಿಯಾಗಾಂಧಿ, ರಾಹುಲ್ ಗಾಂಧಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ

ತಿಹಾರ್ ಜೈಲಿನಲ್ಲಿದ್ದಾಗ ಹಿತ ಕಾಯುವ ಭರವಸೆ ನೀಡಿದ್ದ ಸೋನಿಯಾ ಗಾಂಧಿ(Sonia Gandhi) ಎದುರು ಪಕ್ಷ ನಿಷ್ಠೆ, ನೆಹರೂ ಕುಟುಂಬದ ನಿಷ್ಠೆಯ ದಾಳ ಉರುಳಿಸಿದ್ದಾರೆ. ಕೊಟ್ಟ ಮಾತಿನಂತೆ ಅಧಿಕಾರ ಹಂಚಿಕೆಗೆ ಮುಂದಾಗಬೇಕೆಂದು ಡಿಕೆ ಕೇಳಿಕೊಂಡಿದ್ಧಾರೆ.

ಮಾರು 30 ನಿಮಿಷ ಮಾತುಕತೆ ವೇಳೆ, ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಅಂತ ಸೋನಿಯಾಗಾಂಧಿ ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ಇಬ್ಬರನ್ನೂ ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸುವುದಾಗಿಯೂ ರಾಹುಲ್ ಗಾಂಧಿ (Rahul Gandhi) ಹೇಳಿರುವುದಾಗಿ ದೆಹಲಿ ಮೂಲಗಳು ತಿಳಿಸಿವೆ

ಹೈಕಮಾಂಡ್ ನಾಯಕರ ಭೇಟಿ ಬಳಿಕ ಕಾಲವೇ ಎಲ್ಲದಕ್ಕೂ ಉತ್ತರ ಕೊಡಲಿದೆ ಎಂದು ಹೇಳುವ ಮೂಲಕ ಐದು ವರ್ಷವೂ ನಮ್ಮ ಅಪ್ಪನೇ ಮುಖ್ಯಮಂತ್ರಿ ಅಂದಿರೋ ಯತೀಂದ್ರಗೂ ಡಿಕೆ ಠಕ್ಕರ್ ಕೊಟ್ಟಿದ್ದಾರೆ. ದೆಹಲಿ ಪ್ರವಾಸ ಮುಗಿಸಿ ಬೆಂಗಳೂರಿಗೆ ಆಗಮಿಸಿರುವ ಡಿಸಿಎಂ ಡಿಕೆಶಿ ಕ್ಯಾಬಿನೆಟ್ ಸಭೆಯಲ್ಲಿ ಭಾಗಿ ಆಗಿದ್ದರು.

ಡಿಕೆ ಹೇಳಿದ್ದೇನು?
ಪಕ್ಷದ ಸಂಕಷ್ಟದ ದಿನಗಳಲ್ಲಿ ನೆರವಿಗೆ ನಿಂತಿದ್ದು, ಐಟಿ, ಇಡಿ, ಸಿಬಿಐ ದಾಳಿಯಿಂದ ತಿಹಾರ್ ಜೈಲು ಸೇರಿದ್ದೇನೆ. ತಿಹಾರ್ ಜೈಲಿಗೆ ನೀವೇ ಬಂದು ಭರವಸೆ ಕೊಟ್ಟಿದ್ದೀರಿ. ಕೊಟ್ಟ ಮಾತನ್ನು ನೀವು ಈಡೇರಿಸುವುದು ಯಾವಾಗ ಎಂದು ಕೇಳಿದ್ದಾರೆ.

ಸೋನಿಯಾ ಅಭಯ ಏನು?
ಸ್ವಲ್ಪ ಈಗ ನೀವು ತಾಳ್ಮೆಯಿಂದ ಇರಬೇಕು. ನಿಮಗೆ ಕೊಟ್ಟ ಭರವಸೆಯನ್ನು ಈಡೇರಿಸುತ್ತೇವೆ. ರಾಜ್ಯದ ಪರಿಸ್ಥಿತಿ ನೋಡಿಕೊಂಡು ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ.

ರಾಹುಲ್ ಗಾಂಧಿ ಹೇಳಿದ್ದೇನು?
ಸಿದ್ದರಾಮಯ್ಯ ಹಾಗೂ ನಿಮ್ಮೊಂದಿಗೆ ಮಾತುಕತೆ ನಡೆಸುತ್ತೇವೆ. ಯಾವಾಗ ಮಾತುಕತೆ ಎನ್ನುವುದನ್ನು ಮುಂದೆ ತೀರ್ಮಾನಿಸುತ್ತೇವೆ.ಸಿಎಂ ಹಾಗೂ ನಿಮ್ಮನ್ನು ದೆಹಲಿಗೆ ಕರೆಸಿಕೊಳ್ಳುತ್ತೇವೆ. ಶೀಘ್ರದಲ್ಲೇ ಎಲ್ಲವೂ ನಿರ್ಧಾರ ಆಗಲಿದೆ.

 

Be the first to comment

Leave a Reply

Your email address will not be published. Required fields are marked *

ad image