
ಹಾಸನ: ಹೆರಿಗೆ ನಂತರ ಬಾಣಂತಿ ಸಾವನ್ನಪ್ಪಿರುವ ಘಟನೆ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಶೃತಿ ಅವರನ್ನು ಹೆರಿಗೆಗಾಗಿ ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಹೆರಿಗೆ ಆಗಿದೆ. ಆದರೇ, ಹೆರಿಗೆ ನಂತರ ಬಾಣಂತಿ ಶೃತಿ ಸಾವನ್ನಪ್ಪಿದ್ದಾರೆ. ಬಾಣಂತಿ ಶೃತಿ ಸಾವಿಗೆ ಹಿಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಶೃತಿ ಪತಿ ಹಾಗೂ ಸಂಬಂಧಿಕರು ಆರೋಪ ಮಾಡಿ ಆಸ್ಪತ್ರೆಯ ಮುಂದೆ ಗೋಳಾಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಬಾಣಂತಿ ಶೃತಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಶೃತಿ ಸಾವಿಗೆ ವೈದ್ಯರೇ ಕಾರಣ ಎಂದು ಶೃತಿ ಪತಿ ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ.

ಭಾನುವಾರ ಶೃತಿ ಅವರನ್ನು ಪತಿ ಹಾಗೂ ಸಂಬಂಧಿಕರು ಹೆರಿಗೆಗಾಗಿ ಹಾಸನ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜು ಮತ್ತು ಆಸ್ಪತ್ರೆಗೆ ಕರೆ ತಂದಿದ್ದಾರೆ. ಭಾನುವಾರವಾದ ಕಾರಣ ವೈದ್ಯರು ಇಲ್ಲದೇ ಆಸ್ಪತ್ರೆಯಲ್ಲಿ ಗಂಟೆಗಟ್ಟಲೇ ಶೃತಿ ಕಾಯಬೇಕಾಯಿತು. ಹೆರಿಗೆ ನಂತರ ಬಾಣಂತಿ ಶೃತಿ ಚೆನ್ನಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಹೇಳಿದ್ದರು . ಆದರೇ, ಒಂದು ಗಂಟೆಯ ನಂತರ ಶೃತಿಗೆ ಧೀಡೀರನೇ ಸೀರಿಯಸ್ ಕಂಡೀಷನ್ ಇದೆ ಎಂದು ವೈದ್ಯರು ಹೇಳಿದ್ದರು. ಸುಮಾರು ಆರು ಬಾಟಲ್ ರಕ್ತವನ್ನು ಸಂಬಂಧಿಕರು ತಂದುಕೊಟ್ಟಿದ್ದರು. ನಂತರ ಇಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲು ಸಾಧ್ಯವಾಗಲ್ಲ. ಮೈಸೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹಿಮ್ಸ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಹಾಸನದಿಂದ ಮೈಸೂರಿಗೆ ಬಾಣಂತಿಯನ್ನ ಪತಿ ಕರೆದೊಯ್ಯುತ್ತಿದ್ದರು. ಆದರೇ, ಆಸ್ಪತ್ರೆಯಿಂದ ಅರ್ಧ ಕಿಲೋಮೀಟರ್ ಹೋಗುವಷ್ಟರಲ್ಲಿ ಶೃತಿ ಸಾವನ್ನಪ್ಪಿದ್ದರು. ಹಿಮ್ಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಶೃತಿ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಸಮಸ್ಯೆ ಯಾರಿಗೂ ಆಗಬಾರದು. ಸರ್ಕಾರಿ ಆಸ್ಪತ್ರೆ ಎಂದು ನಂಬಿ ಬರುತ್ತೇವೆ. ಆದರೇ, ಹಿಮ್ಸ್ ಆಸ್ಪತ್ರೆಯ ವ್ಯವಸ್ಥೆ ಸರಿ ಇಲ್ಲ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.






Be the first to comment
Leave a Reply