ಮಹಾಶಿವರಾತ್ರಿ ಹಬ್ಬಕ್ಕೆ ಊರಿಗೆ ಹೋಗೋರಿಗೆ ಗುಡ್ ನ್ಯೂಸ್

ಮಹಾಶಿವರಾತ್ರಿ ಹಬ್ಬಕ್ಕೆ ಊರಿಗೆ ಹೋಗೋರಿಗೆ ಗುಡ್ ನ್ಯೂಸ್

ಬೆಂಗಳೂರು: ಸಾಲು ಸಾಲು ರಜೆ ಮತ್ತು ಮಹಾಶಿವರಾತ್ರಿ ಹಬ್ಬದ ಸಂಭ್ರಮಕ್ಕೆಂದು ಬೆಂಗಳೂರಿನಿಂದ ತಮ್ಮ ಸ್ವಗ್ರಾಮಗಳಿಗೆ ತೆರಳುವ ಪ್ರಯಾಣಿಕರಿಗೆ KSRTC ಸಿಹಿಸುದ್ದಿ ನೀಡಿದೆ. ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಮತ್ತು ಸುಗಮ ಪ್ರಯಾಣಕ್ಕಾಗಿ ಸಾರಿಗೆ ನಿಗಮಗಳು ಬರೋಬ್ಬರಿ 2,155 ಹೆಚ್ಚುವರಿ ಬಸ್‌ಗಳನ್ನ ರಸ್ತೆಗಿಳಿಸಿವೆ.

4 ನಿಗಮಗಳಿಂದ ಜಂಟಿ ಸೇವೆ

ಕೆಎಸ್‌ಆರ್‌ಟಿಸಿ, ಬಿಎಂಟಿಸಿ,  NWKRTC ಮತ್ತು (KKRTC) ನಿಗಮಗಳು ಜಂಟಿಯಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಈ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಿವೆ. ಒಟ್ಟು 2,155 ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿದ್ದು, ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಕಾರ್ಯಾಚರಣೆ ನಡೆಸಲಿವೆ. 895 ಹೆಚ್ಚುವರಿ ಬಸ್‌ಗಳು ಈಗಾಗಲೇ ಸಂಚರಿಸಿವೆ. ಹಬ್ಬಕ್ಕೆ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಇಂದು ಬರೋಬ್ಬರಿ 1,180 ಹೆಚ್ಚುವರಿ ಬಸ್‌ಗಳನ್ನು ಬಿಡಲಾಗುತ್ತಿದೆ. 80 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ಯಾವ ಬಸ್ ಎಲ್ಲಿಂದ ಹೊರಡಲಿದೆ?

ಮೈಸೂರು ಕಡೆಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮೈಸೂರು, ಮಡಿಕೇರಿ ಮತ್ತು ತಮಿಳುನಾಡು ಕಡೆಗೆ ಹೋಗುವ ಬಸ್‌ಗಳು ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಹೊರಡಲಿವೆ. ಉಳಿದಂತೆ ಇತರೆ ಮಾರ್ಗಗಳ ಬಸ್‌ಗಳು ಕೆಂಪೇಗೌಡ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಲಿವೆ.

ಮುಂಗಡ ಬುಕ್ಕಿಂಗ್‌ಗೆ ಮನವಿ

ಪ್ರಯಾಣಿಕರು ಕೊನೆ ಕ್ಷಣದ ನೂಕುನುಗ್ಗಲು ತಪ್ಪಿಸಲು ಕೆಎಸ್‌ಆರ್‌ಟಿಸಿ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸುವಂತೆ ಮನವಿ ಮಾಡಲಾಗಿದೆ. ಹಬ್ಬ ಮುಗಿಸಿ ಊರಿನಿಂದ ವಾಪಸಾಗುವವರಿಗೂ ಇದೇ ಮಾದರಿಯಲ್ಲಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image