ದುಬೈಯಲ್ಲಿ ಸಿಲುಕಿದ್ದ ಕನ್ನಡಿಗರು ತಾಯ್ನಾಡಿಗೆ ವಾಪಸ್​​!

ದುಬೈಯಲ್ಲಿ ಸಿಲುಕಿದ್ದ ಕನ್ನಡಿಗರು ತಾಯ್ನಾಡಿಗೆ ವಾಪಸ್​​!

ದೇವನಹಳ್ಳಿ: ಇರಾನ್-ಇಸ್ರೇಲ್ ಯುದ್ಧದ ಕಾರಣ ವಿಮಾನಗಳು ರದ್ದಾಗಿದ್ದರಿಂದ ದುಬೈಯಿಂದ ವಾಪಸ್ ಬರಲಾಗದೆ ಸಿಲುಕಿದ್ದ ಭಾರತೀಯರು, ಅದರಲ್ಲೂ ಕನ್ನಡಿಗರು ಇದೀಗ ನಿರಾಳರಾಗಿದ್ದಾರೆ. ದುಬೈನಿಂದ ಸೋಮವಾರ ರಾತ್ರಿ ಹೊರಟ ವಿಮಾನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಬಂದಿಳಿಯಿತು. MLC ಭೋಜೇಗೌಡ, ಬ್ಯಾಡಿಂಟ್ಮನ್ ತಾರೆ​​​ ಪಿವಿ ಸಿಂಧು ಸೇರಿ ಅನೇಕರು ಬೆಂಗಳೂರಿಗೆ ಆಗಮಿಸಿದರು.

ಈ ವೇಳೆ ಎಂಎಲ್‌ಸಿ ಭೋಜೇಗೌಡ ಪ್ರತಿಕ್ರಿಯೆ ನೀಡಿ, ‘ನಾನು ದಕ್ಷಿಣ ಆಫ್ರಿಕಾಕ್ಕೆ ಹೋಗಿದ್ದೆ. ಅಲ್ಲಿಂದ ದುಬೈ ಮೂಲಕ ಬೆಂಗಳೂರಿಗೆ ಬರುತ್ತಿದ್ದೆ. ಆದರೆ ದುಬೈನಲ್ಲಿ ಸಮಸ್ಯೆ ಉಂಟಾಗಿದೆ ಎಂಬುದು ಅಲ್ಲಿ ತಲುಪಿದ ಬಳಿಕವೇ ಗೊತ್ತಾಯಿತು. ಮೊದಲು ವಿಮಾನ ಹೊರಡುವುದರಲ್ಲಿ ವಿಳಂಬವಾಯಿತು. ಬಳಿಕ ವಿಮಾನ ರದ್ದುಪಡಿಸಲಾಗಿದೆ ಎಂಬ ಮಾಹಿತಿ ನೀಡಲಾಯಿತು. ದುಬೈ ವಿಮಾನ ನಿಲ್ದಾಣದಲ್ಲಿ ಜಾಗವೇ ಇಲ್ಲದಷ್ಟು ಜನಸಂದಣಿ ಇತ್ತು ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ದೂರವಾಣಿ ಮೂಲಕ ಸಂಪರ್ಕಿಸಿ ಧೈರ್ಯ ನೀಡಿದರು. ನಮಗೆ ದುಬೈನಲ್ಲಿ ಹೋಟೆಲ್‌ನಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಿಕೊಟ್ಟರು. ಆದರೂ ಭದ್ರತೆಯ ಆತಂಕ ಕಾಡುತ್ತಲೇ ಇತ್ತು ಎಂದು ಭೋಜೇಗೌಡ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕರೆ ಮಾಡಿ ವಿಚಾರಿಸಿದರು. ಸಚಿವರಾದ ಕೃಷ್ಣ ಭೈರೇಗೌಡ ಮತ್ತು ಎಚ್.ಕೆ. ಪಾಟೀಲ್ ಕೂಡ ಸಂಪರ್ಕಿಸಿ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು. ಕೃಷ್ಣ ಭೈರೇಗೌಡ ಜೊತೆ ಮಾತಾಡುವಾಗಲೇ ಬಾಂಬ್ ಸ್ಫೋಟದ ಶಬ್ದ ಕೇಳಿಬಂದಿತು ಎಂದು ಆತಂಕದ ಕ್ಷಣಗಳನ್ನು ನೆನಪಿಸಿಕೊಂಡರು.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಕನ್ನಡಿಗರು, ಸುರಕ್ಷಿತವಾಗಿ ಮರಳಿದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ವ್ಯಾಪಾರ, ವೈಯಕ್ತಿಕ ಪ್ರವಾಸ ಅಥವಾ ಕೆಲಸದ ನಿಮಿತ್ತ ಅಬುಧಾಬಿಗೆ ತೆರಳಿದ್ದ ಹಲವರು ಅಲ್ಲಿ ಸಿಲುಕಿಕೊಂಡಿದ್ದರು. ದುಬೈ ಮತ್ತು ಅಬುಧಾಬಿಯಲ್ಲಿ ಯುದ್ಧದ ಭೀತಿಯು ಸಾಕಷ್ಟು ಜನರಲ್ಲಿ ಭಯ ಮೂಡಿಸಿತ್ತು. ಸೋಮವಾರ ಮುಂಜಾನೆ 4.30ಕ್ಕೆ ದುಬೈಗೆ ತೆರಳಿದ್ದ‌‌ ವಿಮಾನ ಅರ್ಧದಿಂದಲೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದೆ. 113 ಪ್ರಯಾಣಿಕರನ್ನು ಹೊತ್ತು ತೆರಳಿದ್ದ ಎಮಿರೇಟ್ಸ್​ ವಿಮಾನ ಭಾರತದ ಗಡಿ ದಾಟುವಷ್ಟರಲ್ಲೇ ದುಬೈ ವಾಯುನೆಲೆ ಬಂದ್ ಮಾಡಲಾಗಿದೆ. ಹೀಗಾಗಿ ವಿಮಾನ ವಾಪಸ್ ಆಯಿತು.

Be the first to comment

Leave a Reply

Your email address will not be published. Required fields are marked *

ad image