
ಮಂಡ್ಯ: ಕಾಂಗ್ರೆಸ್ ಶಾಸಕ ಕದಲೂರು ಉದಯ್ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಸ್ಫೋಟಕ ಆರೋಪ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಜೈಲು ಸೇರಲು ಕುಮಾರಸ್ವಾಮಿ ಕಾರಣ ಎಂದು ಉದಯ್ ಹೇಳಿದ್ದಾರೆ. ಮಂಡ್ಯಕ್ಕೆ ಕೈಗಾರಿಕೆ ತರುವಂತೆ ಸವಾಲು ಹಾಕಿದ್ದು, ಇದು ಮಂಡ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಅಣ್ಣನ ಮಗನನ್ನೇ ಸಹಿಸಿಕೊಳ್ಳಲಿಲ್ಲ, ನಮ್ಮನ್ನು ಸಹಿಸಿಕೊಳ್ತಾರಾ? ಇವರ ಮಗ ಗೆದ್ದಿಲ್ಲ ಅಂತಾ ಷಡ್ಯಂತ್ರ ಮಾಡಿ ಅಣ್ಣನ ಮಗನನ್ನೇ ಜೈಲಿಗೆ ಹಾಕಿಸಿದ್ರು. ಮಾಜಿ ಪ್ರಧಾನಿ ಹೆಚ್ಡಿಡಿ ಮನಸ್ಸು ಮಾಡಿದ್ರೆ ಬಿಡಿಸಬಹುದಿತ್ತು ಎಂದು ಮದ್ದೂರಿನಲ್ಲಿ ಕದಲೂರು ಉದಯ್ ಗಂಭೀರ ಆರೋಪ ಮಾಡಿದ್ದಾರೆ.
‘ತಾಕತ್ತಿದ್ದರೆ ಮಂಡ್ಯಕ್ಕೆ ಕೈಗಾರಿಕೆ ತರಲಿ’
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಗೆ ತಾಕತ್ತಿದ್ದರೆ ಮಂಡ್ಯಕ್ಕೆ ಕೈಗಾರಿಕೆ ತರಲಿ, ನಾನೇ 60-70 ಎಕರೆ ಜಮೀನು ಕೊಡ್ತೀನಿ. ಸರ್ಕಾರದ ಭಾಗವಾಗಿ ನಾವು ಜಾಗ ಕೊಡುತ್ತೇವೆ. ಮೊದಲು ಹೆಚ್ಡಿಕೆ ಯಾವ ಕೈಗಾರಿಕೆ ತರುತ್ತಾರೆ ಅಂತಾ ಹೇಳಲಿ. ಅಭಿವೃದ್ಧಿ ಮಾಡಲು ಛಲ, ಆಸಕ್ತಿ ಬೇಕು. ರೈತರ ಕಷ್ಟ ತಿಳಿದಿರಬೇಕು. ಬರೀ ಭಾಷಣ, ಟಿವಿ ಮುಂದೆ ಹೇಳಿದ್ರೆ ಅಭಿವೃದ್ಧಿ ಆಗುವುದಿಲ್ಲ. ಹೆಚ್ಡಿಕೆ ಮೊದಲು ಪ್ರಾಮಾಣಿಕವಾಗಿ ಕೆಲಸ ಮಾಡಿ ತೋರಿಸಲಿ ಎಂದು ಕಿಡಿ ಕಾರಿದ್ದಾರೆ.
‘ಪ್ರತಿಭಟನೆಗೆ ಫಂಡಿಂಗ್ ಆಗುತ್ತಿದೆ’
ನಗರಸಭೆ ಸೇರ್ಪಡೆ ವಿರೋಧಿಸಿ ಗೆಜ್ಜಲಗೆರೆಯಲ್ಲಿ ಪ್ರತಿಭಟನೆ ಆಗ್ತಿದ್ದು, ನನ್ನ ವಿರುದ್ಧ ಪ್ರತಿಭಟನೆಗೆ ದುಡ್ಡು ಹಂಚಿಕೆ ಮಾಡ್ತಿದ್ದಾರೆ. ನನ್ನ ವೈಯಕ್ತಿಕ ವಿಚಾರ ಬಿಚ್ಚಿಡ್ತೀನಿ ಅಂತಾ ಹೆಚ್ಡಿಕೆ ಹೇಳಿದ್ದಾರೆ, ನನಗೇನು ಮೂರು ಮದುವೆಯಾಗಿದೆಯಾ ಬಿಚ್ಚಿಡುವುದಕ್ಕೆ? ನಾನು ಹಳ್ಳಿ ರೈತನ ಮಗ. ಅವರ ರೀತಿ ಯಾರ ಬಳಿಯೂ ಹೆಲಿಕಾಪ್ಟರ್ ಪಡೆದುಕೊಂಡಿಲ್ಲ. ಭೂಕಬಳಿಕೆ ಆರೋಪ ನನ್ನ ಮೇಲಿಲ್ಲ. ಹೋರಾಟಕ್ಕೆ ನಿತ್ಯ ಹಣ ಬೇಕು, ಅದಕ್ಕೆ ವಿಪಕ್ಷದವರು ಕೊಡ್ತಿದ್ದಾರೆ. ಹಳ್ಳಿ ಜನ ಸಾವಿರಾರು ಖರ್ಚು ಮಾಡಿ ಹೋರಾಟ ಮಾಡಲು ಆಗಲ್ಲ. ಇಷ್ಟು ದಿನ ಎಲ್ಲ ಒಕ್ಕಲಿಗರನ್ನ ಹಾಳು ಮಾಡಿದ್ರಿ. ಇನ್ಮುಂದೆ ಆದರೂ ಒಕ್ಕಲಿಗ ಯುವಕರು ಬೆಳೆಯಲು ಬಿಡಿ ಎಂದು ಶಾಸಕ ಕದಲೂರು ಉದಯ್ ವಾಗ್ದಾಳಿ ನಡೆಸಿದ್ದಾರೆ.






Be the first to comment
Leave a Reply