ದೊಡ್ಡಬಳ್ಳಾಪುರ, ಫೆ.20- ಕಳೆದ ಆರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಸೆಕ್ಯುರಿಟಿ ಗಾರ್ಡ್ನ ಅಸ್ಥಿಪಂಜರ ತಾಲ್ಲೂಕಿನ ಬಾಶೆಟ್ಟಹಳ್ಳಿ ಕೈಗಾರಿಕಾ ಪ್ರದೇಶದ ಬ್ಯಾಂಕ್ ಸರ್ಕಲ್ ಸಮೀಪ ಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಬಾಶೆಟ್ಟಿಹಳ್ಳಿ,ಮಾರಸಂದ್ರ ನಡುವಿನ ರೆಜಾನಾನ್ಸ್ ಲ್ಯಾಬೋರೇಟರಿ ಸಂಸ್ಥೆಗೆ ಸೇರಿದ ಜಮೀನಿನ ನಿರ್ಜನ ಪ್ರದೇಶದಲ್ಲಿ ಗುರುವಾರ ಕಾರ್ಮಿಕರು ಸ್ವಚ್ಚತಾ ಕಾರ್ಯ ನಡೆಯುತ್ತಿದ್ದ ವೇಳೆ ಹೊಂಗೆ ಮರದ ಕೆಳಭಾಗದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ.
ಈ ವೇಳೆ ಮರವನ್ನು ಗಮನಿಸಿದ ಸ್ವಚ್ಚತಾ ಸಿಬ್ಬಂದಿಗೆ ವ್ಯಕ್ತಿಯ ತಲೆ ಬುರುಡೆ ಮರದಲ್ಲಿ ನೇತಾಡುತ್ತಿರುವುದು ಕಾಣಿಸಿದ್ದು, ತಕ್ಷಣವೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ತನಿಖೆಯಲ್ಲಿ, ಸುಮಾರು ಆರು ತಿಂಗಳ ಹಿಂದೆ ಇದೇ ಕಂಪನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಕೊರಟಗೆರೆ ಮೂಲದ ದೇವರಾಜ್ ಅವರದ್ದೇ ಮೃತದೇಹ ಎಂದು ತಿಳಿದುಬಂದಿದೆ.
ಮೃತ ದೇವರಾಜ್ ಅವರು ಕೊರಟಗೆರೆ ಮೂಲದವರಾಗಿದ್ದು, ದೊಡ್ಡಬಳ್ಳಾಪುರ ತಾಲೂಕಿನ ಕೋಳೂರು ಗ್ರಾಮದಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಅವರು ಕಳೆದ ಆರು ತಿಂಗಳಿಂದ ನಾಪತ್ತೆಯಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.






Be the first to comment
Leave a Reply