ಬೆಂಗಳೂರು, ಮಾ.3- ಹತ್ತಾರು ವರ್ಷಗಳಿಂದ ಆಗದಿದ್ದ ಕೆಲಸಗಳು ಕಳೆದ ಒಂದು ಸಾವಿರ ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ಆಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಕಾಸಸೌಧದಲ್ಲಿಂದು ನಡೆದ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈಗ ಎಲ್ಲಾ ಸೇವೆಯನ್ನೂ ಆನ್ಲೈನ್ಗೆ ತರಲಾಗಿದೆ. ಇದನ್ನು ಸಾಧ್ಯವಾಗಿಸಲು ಎಲ್ಲಾ ಜಿಲ್ಲಾಧಿಕಾರಿಗಳ ಪರಿಶ್ರಮ ಗಣನೀಯವಾಗಿದೆ ಎಂದರು.
ಕಂದಾಯ ಇಲಾಖೆಯ ಪ್ರಗತಿ ಬಗ್ಗೆ ಜನರೇ ಮೆಚ್ಚುಗೆ ಮಾತುಗಳನ್ನಾಡುತ್ತಿರುವುದು ವಿಶೇಷ. ನಾವು ಇಲಾಖೆಯಲ್ಲಿ ತಂದಿರುವ ಸುಧಾರಣಾ ಕ್ರಮಗಳು ಜನರಿಗೆ ಅನುಕೂಲವಾಗಿವೆ. ಈ ಹಿಂದೆ ನಮ ಇಲಾಖೆಯ ಬಗ್ಗೆ ಜನರ ಮನಸ್ಸಿನಲ್ಲಿದ್ದಂತಹ ಭಾವನೆಗಳು ಈಗ ಬದಲಾಗಿದ್ದು, ಇಲಾಖೆಯನ್ನು ಗೌರವದಿಂದ ನೋಡುವಂತಾಗಿದೆ ಎಂದು ಹೇಳಿದರು.
ಸಾವಿರ ದಿನಗಳಲ್ಲಿ ನಮೆಲ್ಲರ ಒಗ್ಗಟ್ಟಿನ ಕೆಲಸದ ಪರಿಣಾಮದಿಂದಾಗಿ ಜನರಲ್ಲಿ ಇಲಾಖೆಯ ಬಗ್ಗೆ ಗೌರವ ಭಾವನೆ ಮೂಡಿದೆ. ಇದು ಸಲೀಸಾಗಿ ಆಗಿದ್ದಲ್ಲ. ಸಾಕಷ್ಟು ಪರಿಶ್ರಮದಿಂದ ಈ ದೂರವನ್ನು ನಾವು ಸಾಗಿದ್ದೇವೆ. ಇಲಾಖೆಯಲ್ಲಿ ಬದಲಾವಣೆ ಆರಂಭ ಮಾಡಿದಾಗ ಯಾವ್ಯಾವ ಕೆಲಸಗಳು ಬಾಕಿ ಉಳಿದಿವೆ ಎಂಬ ಮಾಹಿತಿಯೇ ಇರಲಿಲ್ಲ ಎಂದು ತಿಳಿಸಿದರು.
ಅಲ್ಲಿಂದ ಆರಂಭಗೊಂಡ ಕಾರ್ಯವು ಈಗ ಆನ್ಲೈನ್ ಟ್ರ್ಯಾಕಿಂಗ್ ಡೆವಿಸ್ ಅನ್ನು ಅಭಿವೃದ್ಧಿಪಡಿಸಿದ್ದು, ಆ ಮೂಲಕ ಎಷ್ಟು ಜನರ ಕೆಲಸ ಬಾಕಿ ಇದೆ, ಎಷ್ಟು ಅರ್ಜಿ ಬಾಕಿ ಇವೆ, ಎಷ್ಟು ಕೇಸ್ಗಳು ಬಾಕಿ ಇವೆ, ಆರ್ಆರ್ಟಿ ತಿದ್ದುಪಡಿ ಎಷ್ಟು ಬಾಕಿ ಉಳಿದಿವೆ, ಪೌತಿ ಖಾತೆಗಳು ಎಷ್ಟಾಗಬೇಕಿವೆ ಎಂಬೆಲ್ಲಾ ಮಾಹಿತಿಗಳು ಈಗ ಬೆರಳ ತುದಿಯಲ್ಲೇ ಲಭ್ಯವಾಗುತ್ತಿದೆ.
ಇದಕ್ಕೂ ಮೊದಲು ಯಾರ ಬಳಿ ಎಷ್ಟು ಕಡತಗಳಿವೆ ಎಂಬುದೇ ತಿಳಿಯುತ್ತಿರಲಿಲ್ಲ. ಅಂತಹ ಪರಿಸ್ಥಿತಿಯಿಂದ ಇಲಾಖೆಯ ಸೇವೆಗಳನ್ನು ಈಗ ಆನ್ಲೈನ್ಗೆ ತರಲಾಗಿದೆ ಎಂದು ಹೇಳಿದರು.
ಪ್ರಾರಂಭದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಟಪಾಲು ವಿಭಾಗದಲ್ಲಿ ಸ್ವೀಕರಿಸುವ ಅರ್ಜಿಗಳೇ ಈ ಆಫೀಸ್ ಮೂಲಕ ದಾಖಲಾಗಲಿ ಎಂದು ಹೇಳಿದಾಗ ಎಲ್ಲರೂ ದಿಗ್ಭ್ರಮೆಗೊಂಡಿದ್ದರು.
ಈಗ ಗ್ರಾಮ ಲೆಕ್ಕಿಗರಿಂದ ಸರ್ವೆಯರ್ವರೆಗೂ ಎಲ್ಲವೂ ಈ ಆಫೀಸ್ನಲ್ಲೇ ಆಡಳಿತ ನಡೆಯುತ್ತಿದೆ. ಈ ಮಟ್ಟದಲ್ಲಿ ಸುಧಾರಣೆ ತರಲು ಅಧಿಕಾರಿಗಳ ಪರಿಶ್ರಮ ಸಾಕಷ್ಟಿದೆ ಎಂದು ಸಚಿವರು ತಿಳಿಸಿದರು.
ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ, ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಮುನೀಶ್ ಮೌದ್ಗಿಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.






Be the first to comment
Leave a Reply