ಸ್ಯಾಂಡಲ್‌ವುಡ್‌ಗೆ ನಿರ್ಮಾಪಕರಾಗಿ ಎಂಟ್ರಿ ಕೊಟ್ಟ ಮಾಜಿ ಸಚಿವ ಸಾ ರಾ ಮಹೇಶ್‌; ಈ ಸಿನಿಮಾಗೆ ನಾಯಕಿ ಯಾರು ಗೊತ್ತಾ?

ಮಾಜಿ ಸಚಿವ ಸಾ ರಾ ಮಹೇಶ್ ಅವರು ‘ಗೌರಿ ಆರ್ಟ್ಸ್’ ಸಂಸ್ಥೆಯ ಮೂಲಕ ಸ್ಯಾಂಡಲ್‌ವುಡ್‌ಗೆ ನಿರ್ಮಾಪಕರಾಗಿ ಪದಾರ್ಪಣೆ ಮಾಡಿದ್ದಾರೆ. ಕಿರಣ್ ವಿಶ್ವನಾಥ್ ನಿರ್ದೇಶನದ ಈ ಚಿತ್ರಕ್ಕೆ ‘ಮಹಾನಟಿ’ ಖ್ಯಾತಿಯ ಪ್ರಿಯಾಂಕಾ ಆಚಾರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ರಾಜಕಾರಣಿಗಳು ಸಿನಿಮಾರಂಗಕ್ಕೆ ಕಾಲಿಡುವುದು ಹೊಸದೇನು ಅಲ್ಲ. ಎಚ್ ಡಿ ಕುಮಾರಸ್ವಾಮಿ ಅವರಿಗೆ ಸಿನಿಮಾರಂಗದ ನಂಟು ಇದೆ. ಅವರ ಪುತ್ರ ನಿಖಿಲ್‌ ಹೀರೋ ಆಗಿದ್ದಾರೆ. ಸಚಿವ ಜಮೀರ್‌ ಆಹ್ಮದ್‌ ಖಾನ್‌ ಅವರ ಪುತ್ರ ಝೈದ್‌ ಖಾನ್‌ ಕೂಡ ಹೀರೋ ಆಗಿ ಮಿಂಚುತ್ತಿದ್ದಾರೆ. ಇದೀಗ ಸ್ಯಾಂಡಲ್‌ವುಡ್‌ಗೆ ನಿರ್ಮಾಪಕರಾಗಿ ಎಂಟ್ರಿ ಕೊಟ್ಟಿದ್ದಾರೆ ಮಾಜಿ ಸಚಿವ, ಜೆಡಿಎಸ್‌ ಪಕ್ಷದ ಪ್ರಭಾವಿ ನಾಯಕ ಸಾ ರಾ ಮಹೇಶ್‌.

ಸದ್ದಿಲ್ಲದೇ ನಡೆದಿವೆ ಕೆಲಸಗಳು

ಸಾ ರಾ ಮಹೇಶ್ ಅವರು ಗೌರಿ ಆರ್ಟ್ಸ್ ಬ್ಯಾನರ್ ನಡಿ ಚಿತ್ರ ನಿರ್ಮಾಣ ಮಾಡಲು ರೆಡಿಯಾಗಿದ್ದು, ಈಗಾಗಲೇ ಸಿನಿಮಾಕ್ಕೆ ಬೇಕಾದ ಕೆಲಸಗಳು ತೆರೆಮೇಲೆ ನಡೆಯುತ್ತಿವೆ. ತಮ್ಮ ಮೊದಲ ಸಿನಿಮಾದಲ್ಲೇ ಹೊಸಬರಿಗೆ ಅವರು ಪ್ರಧಾನ್ಯತೆ ನೀಡುತ್ತಿದ್ದಾರೆ. ಸುದೀಪ್‌ ಅವರ ಜೊತೆಗೆ ಕೆಲಸ ಮಾಡಿದ ಅನುಭವ ಇರುವ ಕಿರಣ್‌ ವಿಶ್ವನಾಥ್‌ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಇದು ಇವರ ಮೊದಲ ಸಿನಿಮಾವಾಗಿದೆ. ಈ ಮೊದಲು ‘ರನ್ನ’, ‘ವಿಕ್ಟರಿ’ ಸಿನಿಮಾಗಳಿಗೆ ಅವರು ಸಹ-ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಇನ್ನು, ಸಾ ರಾ ಮಹೇಶ್‌ ಅವರನ್ನು ನಿರ್ಮಾಪಕರನ್ನಾಗಿ ಪರಿಚಯಿಸುವ ಪ್ರೋಮೋವೊಂದು ರಿಲೀಸ್‌ ಆಗಿದ್ದು, ನೋಡುಗರ ಗಮನಸೆಳೆದಿದೆ.

ನಾಯಕಿ ಯಾರು?

ಜೀ ಕನ್ನಡದ ಮಹಾನಟಿ ಶೋ ಮೂಲಕ ಫೇಮಸ್‌ ಆಗಿ, ಆನಂತರ ಏಳುಮಲೆ ಚಿತ್ರದಲ್ಲಿ ನಟಿಸಿದ್ದ ಪ್ರತಿಭೆ ಪ್ರಿಯಾಂಕಾ ಆಚಾರ್‌ ಅವರು ಸಾ ರಾ ಮಹೇಶ್ ಅವರ ನಿರ್ಮಾಣದ ಮೊದಲ ಸಿನಿಮಾಗೆ ನಾಯಕಿಯಾಗಿ ಸೆಲೆಕ್ಟ್‌ ಅಗಿದ್ದಾರೆ. ಆದರೆ ಹೀರೋ ಯಾರು ಅನ್ನೋದನ್ನು ಇನ್ನೂ ಬಹಿರಂಗವಾಗಿಲ್ಲ. ಶೀಘ್ರದಲ್ಲೇ ಹೀರೋ ಅನೌನ್ಸ್‌ಮೆಂಟ್‌ ಜೊತೆಗೆ ಟೈಟಲ್‌ ಅನ್ನು ಕೂಡ ರಿವೀಲ್‌ ಮಾಡೋದಕ್ಕೆ ಚಿತ್ರತಂಡ ಪ್ಲ್ಯಾನ್‌ ಮಾಡಿಕೊಂಡಿದೆ.

ಸಂಗೀತಾ ರೀ ಎಂಟ್ರಿ ಕೊಡುತ್ತಿರುವ ಸಿನಿಮಾ

1998ರಲ್ಲಿ ಬಿಡುಗಡೆ ಆಗಿದ್ದ ‘ಯಾರೆ ನೀನು ಚೆಲುವೆ’ ಸಿನಿಮಾದಲ್ಲಿ ನಟಿಸಿ, ಕಮಲಿಯಾಗಿ ಕನ್ನಡಿಗರ ಮನಸ್ಸು ಗೆದ್ದಿದ್ದ ನಟಿ ಸಂಗೀತಾ ಮಾಧವನ್. ಆನಂತರ ‘ಯಾರೆ ನೀ ಅಭಿಮಾನಿ’ ಸಿನಿಮಾದಲ್ಲಿ ಕೂಡ ಅಭಿನಯಿಸಿದ್ದ ಅವರು, ಬಳಿಕ ಕನ್ನಡ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರು. ಇದೀಗ 26 ವರ್ಷಗಳ ನಂತರ ಸಾ ರಾ ಮಹೇಶ್‌ ನಿರ್ಮಾಣದ ಸಿನಿಮಾಕ್ಕಾಗಿ ಅವರನ್ನು ಪುನಃ ಕನ್ನಡಕ್ಕೆ ಕರೆತರಲಾಗುತ್ತಿದೆ.

Be the first to comment

Leave a Reply

Your email address will not be published. Required fields are marked *

ad image