Stock Market Today : 8 ದಿನದಲ್ಲಿ 6ಲಕ್ಷ ಕೋಟಿ ಭಸ್ಮ – ಆಂಥ್ರೋಪಿಕ್, ಎಐ ಮುಂದೆ ಭಾರತದ ಐಟಿ ಷೇರ್ ಥಕಥೈ

ಸಾಫ್ಟ್‌ವೇರ್ ಸೇವಾ ಉದ್ಯಮಕ್ಕೆ ಹೆಸರಾದ ಸಂಸ್ಥೆಗಳ ಸ್ಟಾಕ್’ಗಳು ಭಾರತದಲ್ಲಿನ ಷೇರು ಮಾರುಕಟ್ಟೆಯಲ್ಲಿ ಸತತವಾದ ಹಿನ್ನಡೆಯನ್ನು ಅನುಭವಿಸುತ್ತಿದೆ. ಕಳೆದ ಎಂಟು ದಿನಗಳ ಅವಧಿಯಲ್ಲಿ ಸುಮಾರು ಆರು ಲಕ್ಷ ಕೋಟಿ ರೂಪಾಯಿಯ ಸಂಪತ್ತುಗಳು ಧೂಳೀಪಟವಾಗಿದೆ. ಇವೆಲ್ಲವೂ, ಎಐ ಕ್ರಾಂತಿ ಮತ್ತು ಆಂಥ್ರೋಪಿಕ್ ಸಂಸ್ಥೆಯ ಭೀತಿಯ ಪರಿಣಾಮ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಹೈಲೈಟ್ಸ್‌:
. ಷೇರು ಮಾರುಕಟ್ಟೆಯ ಲೋಕದಲ್ಲಿ ಎಐ ಹುಟ್ಟುಹಾಕಿದ ಸುನಾಮಿ, ಭಾರೀ ನಷ್ಟ
. ಭಾರತದ ಸಾಫ್ಟ್‌ವೇರ್ ಉದ್ಯಮದ ಭವಿಷ್ಯ ಅಯೋಮಯ, ಆಂಥ್ರೋಪಿಕ್ ದಾಳಿಗೆ ತತ್ತರ
. ಭಾರತದ ಐಟಿ ಸಾಮ್ರಾಜ್ಯಕ್ಕೆ ಕೃತಿಕ ಬುದ್ದಿಮತ್ತೆ ಕಂಟಕ, ಟಿಸಿಎಸ್ ಇನ್ಫೋಸಿಸ್ ಸಂಸ್ಥೆಗಳಿಗೆ ನಷ್ಟ

ಮುಂಬೈ : ಭಾರತದ ಪ್ರತಿಷ್ಠಿತ ಸಾಫ್ಟ್‌ವೇರ್ ಸೇವಾ ಉದ್ಯಮಗಳ ಸಾಮ್ರಾಜ್ಯ ದಿನದಿಂದ ದಿನಕ್ಕೆ ಕರಗುತ್ತಿದೆ. ಸುಮಾರು 250 ಶತಕೋಟಿ ಡಾಲರ್ ಮೌಲ್ಯದ ಉದ್ಯಮ ಎಐ ಮತ್ತು ಆಂಥ್ರೋಪಿಕ್ ಆಗಮನದಿಂದ ತತ್ತರಿಸಿ ಹೋಗುತ್ತಿದೆ. ಕಳೆದ ಎಂಟು ದಿನಗಳಲ್ಲಿ ಹೂಡಿಕೆದಾರರ ಬರೋಬ್ಬರಿ 5.7ಲಕ್ಷ ಕೋಟಿ ರೂಪಾಯಿ ಧೂಳೀಪಟವಾಗಿದೆ.

ನಿಫ್ಟಿ ಐಟಿ (Nifty IT ) ಸೂಚ್ಯಂಕವು ಶೇ. ಹತ್ತೊಂಬತ್ತರಷ್ಟು ಕುಸಿದಿರುವುದು ಮಾರುಕಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಕೃತಿಕ ಬುದ್ದಿಮತ್ತೆ (AI) ಮತ್ತು ಆಂಥ್ರೋಪಿಕ್ ಸಂಸ್ಥೆ Claude 4.6 Cowork ಐಟಿ ವಲಯದಲ್ಲಿ ಭೀತಿಯನ್ನು ಹುಟ್ಟುಹಾಕಿದೆ. ಇನ್ನೊಂದು ಕಡೆ, ಲೇಆಫ್ ಭೀತಿ ಎದುರಾಗಿದೆ.

ಈ ಎರಡು ಎಐ ಟೆಕ್ನಾಲಜಿಯು, ಸಾಫ್ಟ್‌ವೇರ್ ಕೆಲಸಗಳನ್ನು ಸರಳೀಕರಣ ಮತ್ತು ಆಟೋಮೇಟೆಡ್ ಮಾಡುತ್ತಿರುವುದರಿಂದ, ಉದ್ಯೋಗಿಗಳ ಸಂಖ್ಯೆಯ ಆಧಾರದ ಮೇಲೆ (Man Hours) ಬಿಲ್ಲಿಂಗ್ ಮಾಡುವ ಭಾರತೀಯ ಐಟಿ ಕಂಪೆನಿಗಳ ವಹಿವಾಟಿಗೆ ಭಾರೀ ಏಟನ್ನು ನೀಡುತ್ತಿದೆ.

ಈ ಹಿನ್ನಲೆಯಲ್ಲಿ ಮ್ಯಾನ್ ಹವರ್ಸ್ ಬಿಲ್ಲಿಂಗ್ ಮಾಡುವುದಕ್ಕಿಂತ ಒಟ್ಟಾರೆಯಾಗಿ ಕೆಲಸದ ಫಲಿತಾಂಶದ ಆಧಾರದ ಮೇಲೆ ಬಿಲ್ಲಿಂಗ್ ಮಾಡುವ ಅನಿವಾರ್ಯತೆ ಐಟಿ ಕಂಪೆನಿಗಳಿಗೆ ಸೃಷ್ಟಿಯಾಗಿದೆ. ಇದರಿಂದಾಗಿ, ಹಿಂದಿನಿಂದಲೂ ಪಾಲಿಸಿಕೊಂಡು ಬರಲಾಗುತ್ತಿರುವ ಐಟಿ ಸೇವೆಗಳಿಗೆ ಬೇಡಿಕೆ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ.

ಪ್ರಮುಖ ಐಟಿ ಕಂಪೆನಿಗಳ ಷೇರು ಕುಸಿತದ ವಿವರ ಹೀಗಿದೆ:

  • ವಿಪ್ರೋ ಮತ್ತು ಟೆಕ್ ಮಹೀಂದ್ರಾ – ಶೇ. 13
  • ಇನ್ಫೋಸಿಸ್ – ಶೇ. 21
  • HCL ಟೆಕ್ – ಶೇ. 17
  • TCS – ಶೇ. 19
  • LTI ಮೈಂಡ್ ಟ್ರೀ – ಶೇ. 11

 

ಷೇರು ಮಾರುಕಟ್ಟೆಯ ಮೇಲೆ ಅಮೆರಿಕಾದ ಪ್ರಭಾವ

ಇನ್ನೊಂದು ಕಡೆ, ವಿಶ್ವದ ಷೇರು ಮಾರುಕಟ್ಟೆಗಳು ಅಮೆರಿಕಾದ ವಹಿವಾಟಿನ ಮೇಲೂ ಅವಲಂಬಿತವಾಗಿದೆ. ಅಲ್ಲಿನ ನಿರುದ್ಯೋಗದ ಪ್ರಮಾಣ ಇಳಿಕೆಯಾಗುತ್ತಿರುವುದು ಮತ್ತು ಟ್ರಂಪ್ ಸರ್ಕಾರ, ಬಡ್ಡಿದರ ಕಡಿತ ಮಾಡುತ್ತದೆ ಎನ್ನುವ ನಿರೀಕ್ಷೆಯು ಹುಸಿಯಾಗುತ್ತಿರುವುದೂ ಷೇರು ಮಾರುಕಟ್ಟೆಯ ಮೇಲೆ ಪ್ರಭಾವವನ್ನು ಬೀರುತ್ತಿದೆ. ಅಮೆರಿಕಾದ ದಿಗ್ಗಜ ಐಟಿ ಕಂಪೆನಿಗಳ ಷೇರುಗಳು ಕುಸಿತಗೊಳ್ಳುತ್ತಿರುವುದರಿಂದ, ಅದರ ನೇರ ಪ್ರಭಾವ, ಭಾರತದ ಐಟಿ ಕಂಪೆನಿಗಳ ಮೇಲೆ ಬೀಳುತ್ತಿದೆ.

ಎಐ ಕ್ರಾಂತಿ ಎಲ್ಲಾ ತಾತ್ಕಾಲಿಕ ಎಂದ ತಜ್ಞರು

ಎಐ ಪ್ರಭಾವದಿಂದಾಗಿ, ಉದ್ಯೋಗ ಕಡಿತ ಉಂಟಾಗುವ ಎಲ್ಲಾ ಸಾಧ್ಯತೆಯಿದೆ ಎನ್ನುವುದು ಹಲವು ತಜ್ಞರ ಅಭಿಪ್ರಾಯವಾಗಿದೆ. ಆದರೆ, ಮಾರುಕಟ್ಟೆಯ ಮೇಲೆ ಎಐ ಸಂಪೂರ್ಣ ಪ್ರಭಾವ ಬೀರುವ ಸಾಧ್ಯತೆ ಕಮ್ಮಿ ಎಂದು ವಾದಿಸುವವರೂ ಇದ್ದಾರೆ. ಹಿಂದೆಯೂ ಈ ರೀತಿಯ ವಿದ್ಯಮಾನಗಳು ನಡೆದಿವೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ವೆಂಚುರಾ ಸಂಸ್ಥೆಯ ಮುಖ್ಯಸ್ಥರ ಪ್ರಕಾರ, “ಹಿಂದೆಯೂ ಕ್ಲೌಡ್ ಕಂಪ್ಯೂಟಿಂಗ್ ಬಂದ ಆರಂಭದಲ್ಲಿ ಐಟಿ ಕ್ಷೇತ್ರದ ಭವಿಷ್ಯ ಮುಗಿಯಿತು ಎಂದು ವಾದಿಸಲಾಗಿತ್ತು. ಆದರೆ, ಪ್ರತೀ ಬಾರಿ ಹೊಸ ಟೆಕ್ನಾಲಜಿ ಬಂದಾಗಲೂ, ಐಟಿ ಕ್ಷೇತ್ರ ಇನ್ನಷ್ಟು ಅಭಿವೃದ್ದಿಗೊಂಡ ಉದಾಹರಣೆಗಳೇ ಹೆಚ್ಚು. ಹಾಗಾಗಿ, ಈಗಿನ ವಿದ್ಯಮಾನಕ್ಕೆ ಪ್ಯಾನಿಕ್ ಆಗುವ ಅವಶ್ಯಕತೆಯಿಲ್ಲ. ಇದೊಂದು ಕೇವಲ ತಾತ್ಕಾಲಿಕ ಬದಲಾವಣೆ” ಎಂದು ಇವರು ಅಭಿಪ್ರಾಯ ಪಟ್ಟಿದ್ದಾರೆ.

ಸದ್ಯ ಹೂಡಿಕೆದಾರರು ರಿಸ್ಕ್ ತೆಗೆದುಕೊಳ್ಳುವುದು ಬೇಡ

ಷೇರುಗಳು ಏರಿಳಿತವನ್ನು ಕಾಣುತ್ತಿದೆ, ಹಾಗಾಗಿ ಈ ಸಮಯದಲ್ಲಿ ಹೂಡಿಕೆ ಮಾಡುವುದು ಜಾಣತನವಲ್ಲ. ಇವೆಲ್ಲವೂ ತಾತ್ಕಾಲಿಕ, ಎಲ್ಲವೂ ಸ್ವಲ್ಪದಿನದಲ್ಲಿ ಸ್ಥಿರವಾಗಲಿದೆ. ಹಾಗಾಗಿ, ಸ್ವಲ್ಪದಿನ ಕಾಯುವುದು ಉತ್ತಮ. ಆದರೆ, ದೀರ್ಘ ಕಾಲಕ್ಕೆ ಹೂಡಿಕೆ ಮಾಡಲು ಬಯಸುವವರಿಗೆ ಇದೊಂದು ಸೂಕ್ತ ಸಮಯವೂ ಆಗಬಹುದು. ಸಾಫ್ಟ್‌ವೇರ್ ಅಪ್ಲಿಕೇಶನ್ ಕೆಲಸಗಳನ್ನು ಎಐ ಸುಲಭವಾಗಿ ನಿರ್ವಹಿಸಬಲ್ಲದು ಎನ್ನುವ ವಾತಾವರಣ ಸದ್ಯ ಸೃಷ್ಟಿಯಾಗುತ್ತಿರುವುದರಿಂದ, ಐಟಿ ಮೇಲೆ ಹೂಡಿಕೆದಾರರು ಸದ್ಯ ರಿಸ್ಕ್ ತೆಗೆದುಕೊಳ್ಳುವುದು ಸೂಕ್ತವಲ್ಲ ಎಂದು ಹಲವು ಎಕ್ಸ್’ಪರ್ಟ್’ಗಳು ಅಭಿಪ್ರಾಯ ಪಟ್ಟಿದ್ದಾರೆ.

Be the first to comment

Leave a Reply

Your email address will not be published. Required fields are marked *

ad image