
ಹೈದರಾಬಾದ್ನಲ್ಲಿ ವಿಚ್ಛೇದನದ ನಂತರ ಮರು ಮದುವೆಯಾಗಿ ಗರ್ಭಿಣಿಯಾಗಿದ್ದ ಮಹಿಳೆಯನ್ನು ಆಕೆಯ ಮಾಜಿ ಪತಿಯೇ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ನಡೆದಿದೆ. 29 ವರ್ಷದ ಸುನೀತಾ ಕೊಲೆಯಾದ ಮಹಿಳೆ. ದೇವರಕೊಂಡ ಮಹೇಶ್ ಕೊಲೆ ಮಾಡಿದ ಮಾಜಿ ಪತಿ. ಇಬ್ಬರು ಸಾಫ್ಟ್ವೇರ್ ಇಂಜಿನಿಯರ್ಗಳಾಗಿದ್ದು ಕೆಲ ಕಾಲ ಇಬ್ಬರೂ ಕೆನಡಾದಲ್ಲಿ ನೆಲೆಸಿದ್ದರು. ಹೈದರಾಬಾದ್ನ ವನಸ್ಥಲೀಪುರಂನಲ್ಲಿ ಈ ಭಯಾನಕ ಘಟನೆ ನಡೆದಿದೆ. ಆಕೆಯ ಮರು ಮದುವೆಯಿಂದ ಅಸಮಾಧಾನಗೊಂಡ ಮಾಜಿ ಪತಿ ಮಹೇಶ್ ಆಕೆಯ ಗಂಡನ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಆಕೆಯನ್ನು ಕೊಲೆ ಮಾಡಿದ್ದಾನೆ. ಸುನೀತಾ ತಮ್ಮ ಮನೆಯಿಂದಲೇ ಕಂಪನಿಯೊಂದಕ್ಕೆ ಕೆಲಸ ಮಾಡುತ್ತಿದ್ದರು. ಘಟನೆ ನಡೆಯುವ ವೇಳೆ ಆಕೆಯ ಅತ್ತೆ ಟೆರೇಸ್ ಮೇಲೆ ಬಟ್ಟೆ ಒಣ ಹಾಕುತ್ತಿದ್ದರೆ ಮಾವ ಮತ್ತೊಂದು ಕೋಣೆಯಲ್ಲಿದ್ದರು. 2024ರಲ್ಲಿ ಸುನೀತಾ ಹಾಗೂ ಮಹೇಶ್ ಮಧ್ಯೆ ವಿಚ್ಚೇದನವಾಗಿತ್ತು. ಕೌಟುಂಬಿಕ ಕಲಹದ ನಂತರ ಆರೋಪಿ ಮಹೇಶ್ ವಿರುದ್ಧ ಸುನೀತಾ ಕೌಟುಂಬಿಕ ಹಿಂಸಾಚಾರ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಆತನ ವಿರುದ್ಧ ಪೊಲೀಸರು ಲುಕೌಟ್ ಸರ್ಕ್ಯುಲರ್ ಹೊರಡಿಸಿದ್ದರು.
ಬುಧವಾರ ಮಧ್ಯಾಹ್ನ ಆರೋಪಿ ಗ್ರೀನ್ ಸಿಟಿ ಕಾಲೋನಿಯಲ್ಲಿರುವ ಸುನಿತಾ ಅವರು ವಾಸವಿದ್ದ ಅವರ ನಾಲ್ಕನೇ ಮಹಡಿಯ ಅಪಾರ್ಟ್ಮೆಂಟ್ಗೆ ನುಗ್ಗಿದ್ದಾನೆ. ನೇರವಾಗಿ ಸುನೀತಾ ಇದ್ದ ಇದ್ದ ಕೋಣೆಗೆ ಹೋಗಿ ಒಳಗಿನಿಂದ ಲಾಕ್ ಮಾಡಿದ್ದಾನೆ . ಅವನ ಬಳಿ ಎರಡು ಚಾಕುಗಳು, ಒಂದು ಪೆಟ್ರೋಲ್ ಬಾಟಲಿ ಮತ್ತು ಒಂದು ಮರ ಕತ್ತರಿಸುವ ಸಣ್ಣ ಕೈ ಗರಗಸವಿತ್ತು. ಆರಂಭದಲ್ಲಿ ಮಹೇಶ್ ಆಕೆಯೊಂದಿಗೆ ತೀವ್ರ ವಾಗ್ವಾದಕ್ಕಿಳಿದು ಕೆಲವೇ ನಿಮಿಷಗಳಲ್ಲಿ ಸುನೀತಾಳ ಮೇಲೆ ಚಾಕುಗಳಿಂದ ಹಲ್ಲೆ ನಡೆಸಿದ್ದಾನೆ. ಆಕೆಯ ತಲೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ.






Be the first to comment
Leave a Reply