
ಬೆಂಗಳೂರು: ರಾಜ್ಯದ ಪ್ರಯಾಣಿಕರಿಗೆ ಇಂದು ಸಾರಿಗೆ ಬಿಸಿ ಮುಟ್ಟುವ ಸಾಧ್ಯತೆ ಇದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಇಂದು ಫ್ರೀಡಂ ಪಾರ್ಕ್ನಲ್ಲಿ ‘ಬೆಂಗಳೂರು ಚಲೋ’ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಸಾರಿಗೆ ನೌಕರರ ಕೂಟ ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಸಾವಿರಾರು ನೌಕರರು ಭಾಗವಹಿಸುವ ನಿರೀಕ್ಷೆಯಿದ್ದು, ಇದರಿಂದ ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಸಂಜೆ 4 ಗಂಟೆಯವರೆಗೆ ಸರ್ಕಾರಕ್ಕೆ ಗಡುವು ನೀಡಲಾಗಿದೆ. ಅಷ್ಟರೊಳಗೆ ಸರ್ಕಾರ ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೌಕರರು ನೀಡಿದ್ದಾರೆ. ಸರ್ಕಾರ ಮತ್ತು ನೌಕರರ ನಡುವೆ ಪ್ರಮುಖವಾಗಿ ಎರಡು ವಿಚಾರಗಳಲ್ಲಿ ಜಟಾಪಟಿ ನಡೆಯುತ್ತಿದೆ. ಹಿಂಬಾಕಿ ಮತ್ತು ವೇತನ ಪರಿಷ್ಕರಣೆ ಜಾರಿ ದಿನಾಂಕದ ಬಗ್ಗೆ ಒಮ್ಮತ ಮೂಡಿಲ್ಲ. ಒಟ್ಟಿನಲ್ಲಿ ಇಂದು ರಾಜಧಾನಿಯಲ್ಲಿ ಸಾರಿಗೆ ನೌಕರರ ಶಕ್ತಿ ಪ್ರದರ್ಶನವಾಗಲಿದೆ. ಪ್ರಯಾಣಿಕರು ಎಚ್ಚರಿಕೆಯಿಂದ ತಮ್ಮ ಪ್ರಯಾಣದ ಯೋಜನೆ ರೂಪಿಸಿಕೊಳ್ಳುವುದು ಒಳ್ಳೆಯದು.

ಸಾರಿಗೆ ನೌಕರರ ಬೇಡಿಕೆಗಳೇನು?
ಬೇಡಿಕೆ-1: 38 ತಿಂಗಳ ಹಿಂಬಾಕಿಗೆ ಸಾರಿಗೆ ನೌಕರರ ಪಟ್ಟು!
ಸರ್ಕಾರದ ನಿಲುವು: ಸರ್ಕಾರ ಕೇವಲ 26 ತಿಂಗಳ ಹಿಂಬಾಕಿ ನೀಡುವುದಾಗಿ ಭರವಸೆ ನೀಡಿದೆ.
ಸಂಘರ್ಷ: ಸರ್ಕಾರದ 26 ತಿಂಗಳ ಆಫರ್ ಅನ್ನ ನೌಕರರು ತಿರಸ್ಕರಿಸಿದ್ದು, 38 ತಿಂಗಳ ಹಿಂಬಾಕಿ ಪಾವತಿಸಲೇಬೇಕೆಂದು ಪಟ್ಟು ಹಿಡಿದಿದ್ದಾರೆ.
ಬೇಡಿಕೆ-2: ವೇತನ ಪರಿಷ್ಕರಣೆ ದಿನಾಂಕ
ಸರ್ಕಾರದ ನಿಲುವು: ವೇತನ ಪರಿಷ್ಕರಣೆಯನ್ನು 2025ರ ಏಪ್ರಿಲ್ನಿಂದ ಅನ್ವಯಿಸುವಂತೆ ಜಾರಿ ಮಾಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆ.
ಸಂಘರ್ಷ: ಸರ್ಕಾರದ ಈ ನಿರ್ಧಾರಕ್ಕೆ ನೌಕರರು ಒಪ್ಪಿಗೆ ಸೂಚಿಸಿಲ್ಲ. 2024ರ ಜನವರಿಯಿಂದಲೇ ಹೆಚ್ಚಳವಾಗಬೇಕೆಂದು ಆಗ್ರಹಿಸಿದ್ದಾರೆ.






Be the first to comment
Leave a Reply